ತೆರಕಣಾಂಬಿ ತಾಪಂ ಕ್ಷೇತ್ರ; ಮೂವರು ನಾಮಪತ್ರ ಸಲ್ಲಿಕೆ

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ತಾಪಂ ಕ್ಷೇತ್ರದ ಉಪಚುನಾವಣೆಗೆ ಮೊದಲನೇ ದಿನವಾದ ಅ.15 ರಂದು ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ತಾಲೂಕು ಪಂಚಾಯಿತಿ ಕಾಂಗ್ರೆಸ್ ಸದಸ್ಯರಾಗಿದ್ದ ಆರ್.ಮಹೇಶ್ ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷ ಹಾಗೂ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದರಿಂದ ತೆರವಾದ ಈ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಅ.16 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ.

ಈ ಹಿನ್ನೆಲೆಯಲ್ಲಿ ಶಾಸಕ ಸಿ.ಎಸ್. ನಿರಂಜನಕುಮಾರ್, ಬಿಜೆಪಿ ಮಂಡಲಾ ಧ್ಯಕ್ಷ ಎನ್.ಮಲ್ಲೇಶ್, ಪುರಸಭೆ ಅಧ್ಯಕ್ಷ ಪಿ.ಗಿರೀಶ್, ಪುರಸಭೆ ಸದಸ್ಯ ರಮೇಶ್ ಮುಂತಾದ ಮುಖಂಡರು ಅಭ್ಯರ್ಥಿ ಆರ್.ಮಹೇಶ್ ಜತೆಗೂಡಿ ಪ್ರವಾಸಿ ಮಂದಿರ ದಿಂದ ಪಾದಯಾತ್ರೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ತಹಶೀಲ್ದಾರ್ ಸಿ. ಭಾರತಿ ಅವರಿಗೆ ನಾಮಪತ್ರ ಸಲ್ಲಿಸಿದರು.
ಇದೇ ರೀತಿಯಾಗಿ ಕಾಂಗ್ರೆಸ್ ಕಚೇರಿ ಯಿಂದ ಮೆರವಣಿಗೆ ಹೊರಟ ಕಾಂಗ್ರೆಸ್ ಮುಖಂಡರಾದ ಎಚ್.ಎಂ.ಗಣೇಶ್ ಪ್ರಸಾದ್, ಕೊಡಸೋಗೆ ಶಿವಬಸಪ್ಪ, ಪಿ.ಮಹ ದೇವಪ್ಪ, ಗೋವಿಂದನಾಯ್ಕ, ವಿಶ್ವನಾಥ್, ಚಿನ್ನಸ್ವಾಮಪ್ಪ ತಮ್ಮ ಅಭ್ಯರ್ಥಿ ನಾರಾಯಣನಾಯ್ಕ ಜತೆಗೂಡಿ ನಾಮಪತ್ರ ಸಲ್ಲಿಸಿದರು. ನಂತರ ಪಕ್ಷೇತರ ಅಭ್ಯರ್ಥಿ ಯಾಗಿ ಸುನಿ ನಾಮಪತ್ರ ಸಲ್ಲಿಸಿದರು.