ಮೈತ್ರಿ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರು ಸರ್ಕಾರಕ್ಕೆ ಸಂಕಷ್ಟ ಎದುರಾಗಲಿದೆ ಎಂದು ನೀಡುತ್ತಿರುವ ಗಡುವುಗಳು ಮುಂದುವರೆಯುತ್ತವೆ ಎಂದು ಹೇಳಿದರು.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ ದಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ಸುಸೂತ್ರವಾಗಿ ಬಗೆಹರಿಯುತ್ತವೆ. ಸರ್ಕಾರದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಲವು ನಿಗಮ ಮಂಡಳಿಗಳ ನೇಮಕ ತಡೆಹಿಡಿದಿರುವ ಹಿಂದೆ ಅಗೌರವ ಸಲ್ಲಿಸುವ ಉದ್ದೇಶವಿಲ್ಲ. ತಾಂತ್ರಿಕ ಕಾರಣ ಗಳಿಂದಾಗಿ ತಡೆ ಹಿಡಿಯಲಾಗಿದೆ ಎಂದರು.

ಸಂಕ್ರಾಂತಿ ವೇಳೆ ಮೈತ್ರಿ ಸರ್ಕಾರ ಡ್ಯಾಮೇಜ್ ಆಗಲಿದೆ ಎಂದು ಬಿಜೆಪಿಯವರು ಹೇಳಿದ್ದಾರೆಂಬ ಬಗ್ಗೆ ಗಮನ ಸೆಳೆದಾಗ, ಸರ್ಕಾರ ರಚನೆಯಾದಾಗಿನಿಂದಲೂ ಬಿಜೆಪಿಯವರು ಗಡುವು ನೀಡುತ್ತಲೇ ಇದ್ದಾರೆ. ಬಹಳಷ್ಟು ಗಡುವು ಮುಗಿದಿವೆ. ಸಂಕ್ರಾಂತಿ, ಶಿವರಾತ್ರಿ, ನಂತರ ಯುಗಾದಿ ಬರಲಿದೆ ಎಂದು ಅಣಕ ಮಾಡುವ ಮೂಲಕ ಬಿಜೆಪಿಯ ಗಡುವುಗಳಿಗೆ ಕೊನೆ ಇಲ್ಲ ಎಂಬುದನ್ನು ಹೀಗೆ ವ್ಯಾಖ್ಯಾನಿಸಿದರು.