ಇಂದು ಚಾಮರಾಜನಗರದಲ್ಲಿ ರೈತ ದಸರಾ ಕಾರ್ಯಕ್ರಮ

ಚಾಮರಾಜನಗರ: ಚಾಮರಾಜನಗರ ದಸರಾ ಮಹೋತ್ಸವ 2018ರ ಅಂಗವಾಗಿ ಅಕ್ಟೋಬರ್ 15ರಂದು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ರೈತ ದಸರಾ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಬೆಳಿಗ್ಗೆ 9 ಗಂಟೆಯಿಂದ ಒಂದೇ ರೈತ ಕುಟುಂಬದ ಸದಸ್ಯರಿಂದ ತಾಳವಾದ್ಯ ಮತ್ತು ಗೀತ ಗಾಯನ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ರೈತಗೀತೆ, 10.15 ರಿಂದ ಉದ್ಘಾಟನೆ ನೆರವೇರಲಿದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ತಾಂತ್ರಿಕ ಗೋಷ್ಠಿಗಳಿವೆ. ವಿಶೇಷ ಆಕರ್ಷಣೆಯಾಗಿ ಕಾಡು ಕೃಷಿ ಆವಿಷ್ಕಾರಕ ಡಾ. ಖಾದರ್ ಅವರಿಂದ ದೇಸಿ ಆಹಾರ, ದೇಶೀ ವ್ಯವಸಾಯ, ಸಂಪೂರ್ಣ ಆರೋಗ್ಯ ಹಾಗೂ ಕೃಷಿ ಮಾರುಕಟ್ಟೆ ತಜ್ಞರಾದ ಡಾ. ವೆಂಕಟರೆಡ್ಡಿ ಅವರಿಂದ ಗ್ರಾಹಕರ ಅಭಿರುಚಿಗೆ ತಕ್ಕಂತೆ ಮಾರುಕಟ್ಟೆ ಕೌಶಲ್ಯಗಳ ಕುರಿತು ವಿಷಯಗಳ ಮಂಡನೆ ನಡೆಯಲಿದೆ.

ಚಿತ್ರೋತ್ಸವದ ವಿವರ: ದಸರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಚಲನಚಿತ್ರೋತ್ಸವದಲ್ಲಿ ಅ.15 ರಂದು ನಗರದ ಭ್ರವiರಾಂಬ ಸಿನಿಫ್ಲೆಕ್ಸ್ ಚಿತ್ರಮಂದಿರದಲ್ಲಿ ರಾಜು ಕನ್ನಡ ಮೀಡಿಯಂ, ಸಿಂಹ ಮೂವೀ ಪ್ಯಾರಡೈಸ್ ಚಿತ್ರಮಂದಿರದಲ್ಲಿ ಹೆಬ್ಬೆಟ್ಟು ರಾಮಕ್ಕ ಚಲನಚಿತ್ರಗಳು ಪ್ರದರ್ಶನವಾಗಲಿದೆ. ಬೆಳಿಗ್ಗೆ 10 ಗಂಟೆಗೆ ಚಲನಚಿತ್ರ ಪ್ರದರ್ಶನ ಆರಂಭವಾಗಲಿದೆ. ಪ್ರವೇಶ ಉಚಿತವಾಗಿದೆ.