ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಐವರು ಅಪರಾಧಿಗಳೆಂದು ನ್ಯಾಯಾಲಯ ಘೋಷಣೆಇಂದು ಶಿಕ್ಷೆ ಪ್ರಮಾಣ ಪ್ರಕಟ

ಮೈಸೂರು, ಜೂ.24(ಎಸ್‍ಪಿಎನ್)- ಒಂದೇ ಕುಟುಂಬದ ನಾಲ್ವರ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಲೆ ಮಾಡಿ, ಮೂವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಐವರ ಆರೋಪಿಗಳನ್ನು ಮೈಸೂರಿನ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅಪರಾಧಿಗಳೆಂದು ಘೋಷಿಸಿದ್ದು, ಶಿಕ್ಷೆ ಪ್ರಮಾಣವನ್ನು ಮಂಗಳವಾರ ಪ್ರಕಟಿಸುವ ಸಾಧ್ಯತೆ ಯಿದೆ. ಮೈಸೂರು ಕೆ.ಎನ್.ಪುರದ ನಿವಾಸಿಗಳಾದ ಹಸೀನಾ, ಆದಿಲ್, ಜಬೀನಾ, ಸಯೀದಾ ಹಾಗೂ ಜರೀನ್ ತಾಜ್‍ರನ್ನು ಅಪರಾಧಿಗಳೆಂದು ಘೋಷಿಸಿದ್ದು, ವಿಚಾರಣಾ ಹಂತದಲ್ಲಿ ಮತ್ತೊಬ್ಬ ಆರೋಪಿ ಕೌಸರ್ ಮೃತಪಟ್ಟಿದ್ದರಿಂದ ವಿಚಾರಣೆಯಿಂದ ಹೊರಗಿಡಲಾಗಿದೆ. ಉದಯಗಿರಿಯ ಕೆ.ಎನ್.ಪುರದ ನಿವಾಸಿಗಳಾದ ಹಸೀನಾ ಮತ್ತು ಅಪ್ಜಲ್ ಪಾಷ ಕುಟುಂಬ ದವರ ನಡುವೆ ದ್ವೇಷವಿತ್ತು. 2014ರ ಮಾ.30ರಂದು ತಡರಾತ್ರಿ ಎರಡು ಕುಟುಂಬಗಳ ನಡುವೆ ಜಗಳ ವಿಕೋಪ ತಿರುಗಿ,  ಅಪ್ಜಲ್ ಪಾಷ, ಶೀರಿನ್ ತಾಜ್, ಸೈಫ್, ಯೂಸೆಫ್ ದಾರುಣವಾಗಿ ಹತ್ಯೆಯಾಗಿದ್ದರು. ಇತರೆ ಸದಸ್ಯರಾದ ಮೈಫೂಸ್, ಯೂನಸ್, ಮಸೂದ್ ಅವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಹಸೀನಾ ಮತ್ತು ಇತರರು ಅಪ್ಜಲ್ ಪಾಷ ಕುಟುಂಬದವರÀ ಮೇಲೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡ ಉದಯಗಿರಿ ಪೊಲೀಸ್ ಠಾಣೆಯ ಅಂದಿನ ಇನ್ಸ್‍ಪೆಕ್ಟರ್ ಶ್ರೀಕಾಂತ್, ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹೊಸಮನಿ ಪುಂಡಲೀಕ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕರಾದ ಧರಣ್ಣಿವರ್ ವಾದ ಮಂಡಿಸಿದ್ದರು.