ಮರಕ್ಕೆ ಡಿಕ್ಕಿ ಹೊಡೆದ ಪ್ರವಾಸಿ ಬಸ್: 15 ವಿದ್ಯಾರ್ಥಿಗಳಿಗೆ ಗಾಯ

ಮಡಿಕೇರಿ, ಡಿ.29- ಚಾಲಕನ ನಿಯಂತ್ರಣ ಕಳೆದುಕೊಂಡ ಪ್ರವಾಸಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್‍ನಲ್ಲಿದ್ದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯ ಗೊಂಡಿರುವ ಘಟನೆ ಭಾನುವಾರ ಮುಂಜಾನೆ 3.20ರ ಸಮಯದಲ್ಲಿ ಆನೆಕಾಡಿನಲ್ಲಿ ಸಂಭವಿಸಿದೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಕಾಲೇಜೊಂದರ ವಿದ್ಯಾರ್ಥಿಗಳು ಮಡಿಕೇರಿ ಪ್ರವಾಸ ಮುಗಿಸಿ ತಡ ರಾತ್ರಿ ಬಸ್‍ನಲ್ಲಿ ಹಿಂತಿರುಗುತ್ತಿದ್ದರು. ಈ ಸಂದರ್ಭ ಆನೆಕಾಡು ಬಳಿ ಚಾಲಕನ ನಿಯಂತ್ರಣ ಕಳೆದು ಕೊಂಡ ಬಸ್ ಹೆದ್ದಾರಿ ಬದಿಯ ಸಿಮೆಂಟ್ ಕಂಬಗಳಿಗೆ ಡಿಕ್ಕಿ ಹೊಡೆದು ಬಳಿಕ ಮರಕ್ಕೆ ಅಪ್ಪಳಿಸಿ ನಿಂತಿದೆ. ಪರಿಣಾಮ ಬಸ್‍ನೊಳಗಿದ್ದ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯ ಗೊಂಡಿದ್ದಾರೆ. ಈ ವೇಳೆ ಮೈಸೂರಿನಿಂದ ಸುಂಟಿಕೊಪ್ಪಕ್ಕೆ ಕಾರಿನಲ್ಲಿ ಬರುತ್ತಿದ್ದ ಇಬ್ರಾಹಿಂ ಬಾಪು ಹಾಗೂ ಆತಿಕ್ ಅವರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಗಾಯಾಳು ಗಳನ್ನು ಕುಶಾಲನಗರ ಆಸ್ಪತ್ರೆಗೆ ದಾಖಲಿಸಿದರು.