ಆ.24, ಹೆಚ್.ಡಿ.ಕೋಟೆಯಲ್ಲಿ ಬುಡಕಟ್ಟು ಜನರ ಹಕ್ಕೊತ್ತಾಯ ಕಾರ್ಯಾಗಾರ

ಮೈಸೂರು,ಆ.21(ಆರ್‍ಕೆಬಿ)-ಹೆಚ್.ಡಿ.ಕೋಟೆ ಬುಡ ಕಟ್ಟು ಕೃಷಿಕರ ಸಂಘ ಹಾಗೂ ಸರಗೂರು ತಾಲೂಕು ಬುಡಕಟ್ಟು ಕೃಷಿಕರ ಸಂಘದ ಜಂಟಿ ಆಶ್ರಯದಲ್ಲಿ ಆ.24 ರಂದು ಬೆಳಿಗ್ಗೆ 11 ಗಂಟೆಗೆ ಹೆಚ್.ಡಿ.ಕೋಟೆ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ 25ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ ಬುಡಕಟ್ಟು ಜನರ ಹಕ್ಕೊತ್ತಾಯ ಕಾರ್ಯಾಗಾರ ನಡೆಸಲಾಗುವುದು ಎಂದು ರಾಜ್ಯ ಮೂಲ ಆದಿವಾಸಿ ವೇದಿಕೆ ಅಧ್ಯಕ್ಷ ವಿಜಯಕುಮಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಾ ಗಾರದಲ್ಲಿ ಒಂದು ಸಾವಿರ ಬುಡಕಟ್ಟು ವಾಸಿಗಳು ಭಾಗ ವಹಿಸಲಿದ್ದಾರೆ ಎಂದರು. ಅಂದು ಶಾಸಕ ಅನಿಲ್ ಚಿಕ್ಕ ಮಾದು ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ. ಪ್ರೊ. ಮುಜಾಫರ್ ಅಸ್ಸಾದಿ, ಡಾ.ಎಂ.ಪಿ. ಮಹೇಂದ್ರಕುಮಾರ್, ನಂಜುಂಡಯ್ಯ ಇನ್ನಿತರರು ಬುಡಕಟ್ಟು ಜನರಿಗೆ ಸಂಬಂ ಧಿಸಿದ ಸಮಸ್ಯೆಗಳು ಹಾಗೂ ಸರ್ಕಾರದಿಂದ ಅಗತ್ಯ ವಾಗಿರುವ ಕ್ರಮಗಳ ಕುರಿತು ಮಾತನಾಡಲಿದ್ದಾರೆ. ಈ ಎಲ್ಲಾ ವಿಷಯಗಳ ಚರ್ಚೆ ಬಳಿಕ ಹಕ್ಕೊತ್ತಾಯಗಳನ್ನು ರೂಪಿಸಿ, ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ಸರ್ಕಾರದ ಅನೇಕ ಯೋಜನೆಗಳ ಪ್ರಯೋಜನ ಬುಡಕಟ್ಟು ಜನರಿಗೆ ತಲುಪುತ್ತಿಲ್ಲ. ಜೊತೆಗೆ ಅರಣ್ಯ ಅಧಿಕಾರಿಗಳು ನಿಯಮಗಳ ಹೆಸರಿನಲ್ಲಿ ಬುಡಕಟ್ಟು ಜನರಿಗೆ ಕಿರುಕುಳ ನೀಡುತ್ತಿರುವ ಬಗ್ಗೆಯೂ ಹಕ್ಕೊತ್ತಾಯಗಳಲ್ಲಿ ಪ್ರಸ್ತಾಪಿಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಬುಡಕಟ್ಟು ಕೃಷಿಕರ ಸಂಘದ ಪದಾಧಿಕಾರಿಗಳಾದ ನಟರಾಜು, ಬಸವರಾಜು, ಚಿಕ್ಕಬೊಮ್ಮ, ಗೀತಾ ಉಪಸ್ಥಿತರಿದ್ದರು.