ಬ್ಯಾಂಕ್ ನೋಟ್ ಪೇಪರ್ ಮಿಲ್‍ನಿಂದ ಅಗ್ನಿಶಾಮಕ ಸೇವೆಗೆ ವಾಹನ ಕೊಡುಗೆ

ಮೈಸೂರು: ಮೆ|| ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ. ನಿಂದ ಸಿಎಸ್‍ಆರ್ ಯೋಜನೆಯಡಿ ಕ್ಷಿಪ್ರ ಸ್ಪಂದನಾ ತಂಡದ ನಿರ್ವಹಣೆಗಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಒಂದು ಬೊಲೆರೋ ವಾಹನವನ್ನು ನೀಡಿದೆ.

ಮೈಸೂರಿನ ಹೆಬ್ಬಾಳಿನಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಮೆ: ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ. ಚೀಫ್ ಮ್ಯಾನೇಜಿಂಗ್ ಡೈರೆಕ್ಟರ್ ಜಗನ್‍ಮೋಹನ್‍ರಾವ್ ಅವರು ಮೈಸೂರು ಪ್ರಾಂತದ ಮುಖ್ಯ ಅಗ್ನಿಶಾಮಕ ಅಧಿಕಾರಿ ಯೂನಸ್ ಅಲಿ ಕೌಸರ್ ಅವರಿಗೆ ವಾಹನದ ಕೀಲಿಯನ್ನು ಹಸ್ತಾಂತರಿಸಿದರು.

ಬೆಂಕಿ ಅವಘಡ ಸಂಭವಿಸಿದಾಗ ತಕ್ಷಣ ಸ್ಥಳಕ್ಕೆ ಧಾವಿಸಿ ಅವಾಂತರ ತಪ್ಪಿಸುವ ಸಲುವಾಗಿ ಕ್ಷಿಪ್ರ ಸ್ಪಂದನಾ ತಂಡ(Quick Response Team)ದ ನಿರ್ವಹಣೆಗೆ ಅನುಕೂಲವಾಗುವಂತೆ 8 ಲಕ್ಷ ರೂ.ಮೌಲ್ಯದ ಈ ವಾಹನವು ಸಹಕಾರಿಯಾಗಲಿದೆ.
ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈ.ಲಿ.ನ ಚೀಫ್ ಜನರಲ್ ಮ್ಯಾನೇಜರ್ ಎಕೆ.ಮಂಡಲ್, ಕೆ.ಜಿ.ವಿಶ್ವನಾಥನ್, ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಲಿಂಗರಾಜು, ನಿವೃತ್ತ ಜಂಟಿ ನಿರ್ದೇಶಕ ರಾಮಕೃಷ್ಣೇಗೌಡ ಸೇರಿದಂತೆ ಇನ್ನಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.