ಸಂಪಾಜೆಯಲ್ಲಿ ಹೆಚ್.ಡಿ.ರೇವಣ್ಣಗೆ ಸ್ವಾಗತ

ಮಡಿಕೇರಿ: ಕೊಡಗಿನಲ್ಲಿ ಸುರಿ ಯುತ್ತಿರುವ ಭಾರಿ ಮಳೆ ಹಾಗೂ ನೆರೆ ಹಾವಳಿಯಿಂದ ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟಗೊಂಡಿರುವ ಬಗ್ಗೆ ಚರ್ಚೆ ನಡೆಸಲು ಆಗಮಿಸಿದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರನ್ನು ಕೊಡಗಿನ ಗಡಿ ಭಾಗ ಸಂಪಾಜೆಯಲ್ಲಿ ಜೆಡಿಎಸ್‍ನ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ನೇತೃ ತ್ವದಲ್ಲಿ ಬರಮಾಡಿಕೊಳ್ಳಲಾಯಿತು.

ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರಿ ಮಳೆಯಿಂದ ರೈತರಿಗಾಗಿರುವ ಅಪಾರ ನಷ್ಟವನ್ನು ಕೂಡಲೇ ಕೊಡಿಸಿಕೊಡುವಂತೆ, ರೈತರ ಕೃಷಿ ಸಾಲಮನ್ನಾ ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯಲು ಮನವಿ ಮಾಡಲಾಯಿತು. ಆನೆ-ಮಾನವ ಸಂಘರ್ಷ ದಲ್ಲಿ ಅಂಗವೈಪಲ್ಯತೆ ಕಂಡಿರುವ ಕುಟುಂ ಬಗಳಿಗೆ ವಿಶೇಷ ಪರಿಹಾರ ಒದಗಿಸು ವಂತೆ ಹಾಗೂ ಆನೆ-ಮಾನವ ಸಂಘರ್ಷ ವನ್ನು ತಪ್ಪಿಸಲು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಂದ ವಿಶೇಷ ವರದಿ ತರಿಸಿಕೊಳ್ಳಲು ಮನವಿ ಮಾಡಲಾಯಿತು.

ದಕ್ಷಿಣ ಕೊಡಗಿಗೆ ಮಾರಕವಾಗಿರುವ ರೈಲ್ವೆ ಯೋಜನೆ ವಿಚಾರದಲ್ಲಿ ಸರ್ವೇ ಕಾರ್ಯ ನಡೆಸಲು ಮುಂದಾಗಿದೆ. ಯಾವುದೇ ಕಾರಣಕ್ಕೂ ದಕ್ಷಿಣ ಕೊಡಗಿನ ಮೂಲಕ ರೈಲ್ವೆ ಸಂಪರ್ಕ ಕಲ್ಪಿಸುವ ವಿಚಾರದಲ್ಲಿ ರಾಜ್ಯ ಸರ್ಕಾರ ಸಹಕರಿಸದಂತೆ ಎಚ್ಚರ ವಹಿಸಲು ಕ್ರಮ ಕೈಗೊಳ್ಳುವಂತೆ, ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಮನವಿ ಪತ್ರವನ್ನು ಇದೇ ಸಂದರ್ಭ ಸಚಿವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಪಮಾಲೆ ಗಣೇಶ್, ಮನೇನ್,ಮಂಜುನಾಥ್, ಅಮ್ಮಂಡ ವಿವೇಕ್, ನೂರ್ ಅಹಮದ್, ಎಸ್.ಎನ್.ರಾಜಾರಾವ್, ಸಂಜಯ್, ವಿಶ್ವ, ಗಣೇಶ್, ಅಧಿಕಾರಿಗಳಾದ ವಿನಯ್ ಕುಮಾರ್, ಇಬ್ರಾಹಿಂ ಉಪಸ್ಥಿತರಿದ್ದರು.