ವ್ಹಿಪ್ ಸಂಬಂಧ ಹೇಳಿಕೆ: ಬಿಎಸ್‍ವೈ ಇಕ್ಕಟ್ಟಿಗೆ

ಬೆಂಗಳೂರು, ಜು.18(ಕೆಎಂಶಿ)- ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಕಾಂಗ್ರೆಸ್-ಜೆಡಿಎಸ್ ಸದಸ್ಯರಿಗೆ ಸಂಬಂಧಪಟ್ಟ ಪಕ್ಷಗಳು ವ್ಹಿಪ್ ಜಾರಿ ಮಾಡುವಂತಿಲ್ಲ ಎಂದು ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ಹೇಳಿಕೆ ನೀಡಿ, ಇಕ್ಕಟ್ಟಿಗೆ ಸಿಲುಕಿದರು. ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ಅವರು, ನ್ಯಾಯಾಲಯ ವ್ಹಿಪ್ ನೀಡಬಾರದು ಎಂದು ಹೇಳಿದೆ ಎಂದು ಹೇಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಯನ್ನು ಯಡಿಯೂರಪ್ಪ ನವರಿಗೆ ತೋರಿಸಿ, ಅವರ ಹೇಳಿಕೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದರು. ಆಡಳಿತ ಪಕ್ಷದ ಸದಸ್ಯರು ಏಕಾಏಕಿ ತಮ್ಮ ವಿರುದ್ಧ ಹರಿಹಾಯ್ದಿದ್ದನ್ನು ಗಮನಿಸಿದ ಪ್ರತಿಪಕ್ಷದ ನಾಯಕರು ತಕ್ಷಣವೇ ಹೇಳಿಕೆಯನ್ನು ಹಿಂತೆಗೆದುಕೊಂಡು, ಬೇರೆ ವಿಷಯ ಪ್ರಸ್ತಾಪಿಸಿದರು.