ಮಲ್ಲಳ್ಳಿ ಜಲಪಾತದಲ್ಲಿ ಸೆಲ್ಫಿ ಗೀಳಿಗೆ ಯುವಕ ನೀರುಪಾಲು

ಸೋಮವಾರಪೇಟೆ:  ಮಲ್ಲಳ್ಳಿ ಜಲಪಾತಕ್ಕೆ ವಿಹಾರಕ್ಕಾಗಿ ತೆರಳಿದ್ದ ಯುವಕನೋರ್ವ ಸೆಲ್ಫಿ ತೆಗೆದುಕೊಳ್ಳುತ್ತಿ ದ್ದಾಗ ಕಾಲುಜಾರಿ ಪ್ರಪಾತಕ್ಕೆ ಬಿದ್ದು ದುರ್ಮರಣಕ್ಕೀಡಾದ ಘಟನೆ ಶುಕ್ರವಾರ ಸಂಜೆ 5 ಗಂಟೆಗೆ ಸಂಭವಿಸಿದೆ.

ಕುಶಾಲನಗರ ಸುಂದರನಗರದ ನಿವಾಸಿ ನಾಗರಾಜು ಎಂಬುವವರ ಪುತ್ರ ಮನೋಜ್ (24) ಸೆಲ್ಫಿ ಗೀಳಿಗೆ ಬಲಿಯಾದ ಯುವಕ ಮೃತ ಮನೋಜ್ ತನ್ನ ಐವರು ಸ್ನೇಹಿತರುಗಳಾದ ಅರುಣ, ಅನಿಲ್ ಕುಮಾರ್, ಮಂಜು, ವಿಜಯಕುಮಾರ್, ಜಾನ್ಸನ್ ಎಂಬುವವರೊಂದಿಗೆ ಶಾಂತಳ್ಳಿಯ ಕುಮಾರಲಿಂಗೇ ಶ್ವರ ಸಮೂದಾಯ ಭವನದಲ್ಲಿ ಶುಕ್ರವಾರ ವಿವಾಹ ಸಮಾರಂಭಕ್ಕೆಂದು ಆಗಮಿಸಿ, ನಂತರದಲ್ಲಿ ಸಂಜೆ ಸುಮಾರು 4 ಗಂಟೆ ವೇಳೆಗೆ ಮೂರು ಮೋಟಾರು ಬೈಕಿನಲ್ಲಿ ಮಲ್ಲಳ್ಳಿ ಜಲಪಾತ ವೀಕ್ಷಿಸಲೆಂದು ತೆರಳಿದ್ದರು.

ಜಲಪಾತದ ಮೇಲ್ಬಾಗದಲ್ಲಿ ನಿಂತು ಮೊಬೈಲ್‍ನಲ್ಲಿ ಸೆಲ್ಫಿ ತೆಗೆಯುತ್ತಿದ್ದ ಸಂದರ್ಭ ಆಯತಪ್ಪಿ ಜಲಪಾತಕ್ಕೆ ಬಿದ್ದಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸ್ನೇಹಿತನಾದ ಅನಿಲ್‍ಕುಮಾರ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾತ್ರಿಯಾದ ಕಾರಣ ಶೋಧ ಕಾರ್ಯ ನಡೆಸಲು ಅಸಾಧ್ಯವಾದ ಹಿನ್ನಲೆಯಲ್ಲಿ ಶನಿವಾರ ಮೃತ ದೇಹವನ್ನು ಹುಡುಕುವ ಕಾರ್ಯ ನಡೆಯಲಿದೆ.