ಆರೋಗ್ಯವಂತ ಸಮಾಜಕ್ಕೆ ಎಲ್ಲರ ಸಹಕಾರ ಅಗತ್ಯ

ಯಳಂದೂರು, ಡಿ.23(ವಿ.ನಾಗರಾಜು)- ಆರೋಗ್ಯ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮಾಜಿ ಶಾಸಕ ಎಸ್. ಬಾಲರಾಜು ಕರೆ ನೀಡಿದರು.

ಅವರು ಭಾನುವಾರ ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಎಸ್. ಬಾಲರಾಜು ಸ್ನೇಹ ಬಳಗ, ಕೊಯಮತ್ತೂರಿನ ಅರವಿಂದ ಕಣ್ಣಾಸ್ಪತ್ರೆಯ ವತಿಯಿಂದ ಆಯೋಜಿಸಿದ್ದ ಬೃಹತ್ ಉಚಿತ ಕಣ್ಣಿನ ತಪಾಸಣಾ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಳ್ಳೆ ಕಾರ್ಯಗಳನ್ನು ಮಾಡಬೇಕಾದರೆ ಇದಕ್ಕೆ ಇಂತಹದೆ ದಿನ, ಸಮಯವನ್ನು ನಿಗದಿ ಮಾಡಿಕೊಳ್ಳಬಾರದು. ತಕ್ಷಣವೇ ಇದರ ಬಗ್ಗೆ ಕಾರ್ಯಪ್ರವೃತ್ತ ರಾಗಬೇಕು. ಇದೊಂದು ಸೇವಾ ಕಾರ್ಯವಾಗಿದ್ದು ಯಾವುದೇ ಕಾರಣಕ್ಕೂ ಇದನ್ನು ಲಾಭದ ದೃಷ್ಟಿಯಿಂದ ನೋಡಬಾರದು. ಈ ನಿಟ್ಟಿನಲ್ಲಿ ಸ್ನೇಹ ಬಳಗದ ಈ ಕೆಲಸ ಶ್ಲಾಘನೀಯ. ಇನ್ನು ಮುಂದೆ ಪ್ರತಿ ತಿಂಗಳೂ ಉದ್ಯೋಗಮೇಳ ಸೇರಿದಂತೆ ಇಂತಹ ಸಮಾಜಪರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಕಾರಾಪುರ ವಿರಕ್ತ ಮಠದ ಶ್ರೀ ಬಸವರಾಜಸ್ವಾಮಿಜಿ ಮಾತ ನಾಡಿ, ಈಚೆಗೆ ಪ್ರಖರ ಬೆಳಕಿಗೆ ಮನುಷ್ಯ ಒಗ್ಗಿಕೊಂಡಿದ್ದಾನೆ. ಇದು ಹಲವು ದೃಷ್ಟಿ ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ. ಭಾರತ ದಲ್ಲಿ ಕೋಟ್ಯಾಂತರ ಮಂದಿ ದೃಷ್ಟಿಹೀನರಿದ್ದಾರೆ. ಕಣ್ಣು ಮನುಷ್ಯನ ಅತಿ ಮುಖ್ಯ ಅಂಗವಾಗಿದೆ. ಇದನ್ನು ಜೋಡಿಸುವ ಕೆಲಸವನ್ನು ಮಾಡಬೇಕು. ದೃಷ್ಟಿ ಸಮಸ್ಯೆ ಸಣ್ಣದಿರುವಾಗಲೇ ಇದಕ್ಕೆ ಪರಿಹಾರ ವನ್ನು ಕಂಡುಕೊಳ್ಳಬೇಕು. ಬಡವರಿಗೆ ಅನುಕೂಲ ವಾಗಲೆಂದು ಇಂತಹ ಕಾರ್ಯಕ್ರಮಗಳ ಆಯೋಜನೆ ಅಭಿನಂದನಾರ್ಹ ಎಂದರು.

ನೇತ್ರ ತಪಾಸಣೆಗೆ ಬಂದಿದ್ದ 100 ಕ್ಕೂ ಹೆಚ್ಚು ಮಂದಿಯಲ್ಲಿ 30 ಮಂದಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿ ಅವರನ್ನು ಕೊಯ ಮತ್ತೂರಿನ ಅರವಿಂದ ಕಣ್ಣಾಸ್ಪತ್ರೆಗೆ ಕರೆದೊಯ್ಯಲಾಯಿತು. ಬೋಧಿರತ್ನ ಬಂತೇಜಿ, ಜಿಪಂ ಸದಸ್ಯರಾದ ಜೆ. ಯೋಗೇಶ್, ಉಮಾವತಿ ಸಿದ್ದರಾಜು, ತಾಪಂ ಅಧ್ಯಕ್ಷ ನಿರಂಜನ್, ಪಪಂ ಸದಸ್ಯರಾದ ಮಹೇಶ್. ವೈ.ಜಿ.ರಂಗನಾಥ, ಮಹಾದೇವನಾಯಕ, ಪ್ರಭಾವತಿರಾಜಶೇಖರ್, ಮಾಜಿ ಸದಸ್ಯರಾದ ಭೀಮಪ್ಪ, ಜೆ. ಶ್ರೀನಿವಾಸ್, ಕಲಾವಿದ ಮಳವಳ್ಳಿಮಹಾದೇವ, ಮದ್ದೂರು ಸೋಮು, ಮದ್ದೂರು ಕುಮಾರ, ಕಂದಹಳ್ಳಿಮಹೇಶ್, ಎ.ಎನ್. ನಾಗೇಂದ್ರ, ನಂಜಯ್ಯ, ದೊರೆ, ಚೈತ್ರಮಣಿ ಇತರರು ಇದ್ದರು.