ಬೈಕುಗಳ ನಡುವೆ ಡಿಕ್ಕಿ: ಓರ್ವ ಸಾವು, ಮತ್ತೋರ್ವನಿಗೆ ಗಾಯ

ಮೈಸೂರು: ಎರಡು ಬೈಕುಗಳ ನಡುವೆ ಡಿಕ್ಕಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಕೆ.ಆರ್.ನಗರ ತಾಲೂಕು, ಕಲ್ಯಾಣಪುರ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ.
ಗ್ರಾಮದ ಸತೀಶ್ ನಾಯಕ(32) ಸಾವನ್ನಪ್ಪಿದವರಾಗಿದ್ದು, ತೀವ್ರವಾಗಿ ಗಾಯಗೊಂಡಿರುವ ಉದಯ್ ಅವರನ್ನು ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಸನ-ಮೈಸೂರು ಹೆದ್ದಾರಿಯ ಕಲ್ಯಾಣಪುರ ಬಳಿ ಎರಡು ಬೈಕುಗಳು ಡಿಕ್ಕಿ ಹೊಡೆದ ಪರಿಣಾಮ ಸತೀಶ್ ನಾಯಕ ತಲೆಗೆ ತೀವ್ರ ಗಾಯಗಳಾಗಿ ರಕ್ತಸ್ರಾವವಾದ ಕಾರಣ ಅವರು ಸ್ಥಳದಲ್ಲೇ ಅಸುನೀಗಿದರು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಕೆ.ಆರ್.ನಗರ ಸರ್ಕಲ್ ಇನ್ಸ್‍ಪೆಕ್ಟರ್ ಕೆ.ಕೆ. ರಘು, ಸಬ್‍ಇನ್ಸ್‍ಪೆಕ್ಟರ್ ಶಿವಪ್ರಕಾಶ್ ಹಾಗೂ ಸಿಬ್ಬಂದಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.