ವಿ.ಪೇಟೆ ಬಸವೇಶ್ವರ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವ

ವಿರಾಜಪೇಟೆ: ಪಟ್ಟಣದ ಜೈನರ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಬಸವೇಶ್ವರ ದೇವಾಲಯದಲ್ಲಿ ಏ.27 ಹಾಗೂ 28ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಜಿ.ಕಾಮತ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎನ್.ಜಿ.ಕಾಮತ್ ಅವರು, ಏ.27ರಂದು ಸಂಜೆ 4 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಯೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಿದ್ದು, ಪೂಜಾ ವಿಧಿ ವಿಧಾನಗ ಳೊಂದಿಗೆ ಮಹಾ ಸುದರ್ಶನಹೋಮ, ವಾಸ್ತು ಹೋಮ, ವಾಸ್ತು ಬಲಿದಾನ, ಪ್ರಾಕಾರ ಬಲಿದಾನ ನಂತರ ರಾತ್ರಿ ಮಹಾ ಪೂಜೆಯ ಬಳಿಕ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು. ಆಡಳಿತ ಮಂಡಳಿಯ ಜೆ.ಎನ್. ಪುಷ್ಪರಾಜ್ ಮಾತನಾಡಿ, ಅಷ್ಟಬಂಧ ಬ್ರಹ್ಮ ಕಲಶೋತ್ಸವವು ವೇದಮೂರ್ತಿ ಪಂಡರೀಶ ಅರಳಿತ್ತಾಯ ತಂತ್ರಿ ಅವರ ನೇತೃತ್ವದಲ್ಲಿ ಪುಣ್ಯ ಕಾರ್ಯಕ್ರಮಗಳು ನಡೆಯಲಿದ್ದು ಏ.28ರಂದು ಶನಿವಾರ ಬೆಳಿಗ್ಗೆ 6ಗಂಟೆ ಯಿಂದ ದ್ವಾದಶ ನಾಳಿಕೇರ ಗಣ ಹೋಮ, ಪ್ರತಿಷ್ಠಾ ಹೋಮ, ಪ್ರತಿಷ್ಠ ಕಲಶಾಭಭಿ ಷೇಕ, ಅಷ್ಟ ಚತ್ವಾರಿ ಕಲಶ ಪೂಜೆ, ಅಷ್ಟ ಬಂಧ ಲೇಪನ ಬ್ರಹ್ಮಕಲಶಾಭಿಷೇಕ, ಮಹಾ ಪೂಜಾ ಸೇವೆ, ನಂತರ ಅನ್ನ ಸಂತರ್ಪಣೆ ಜರುಗಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಸಂಪತ್ ಕುಮಾರ್, ಚಂದ್ರ ಪ್ರಸಾದ್ ಹಾಗೂ ಅರ್ಚಕ ಮೋಹನ್‍ರಾಜ್ ಹಾಜರಿದ್ದರು.