ಕಾರು-ಬೈಕ್ ಡಿಕ್ಕಿ; ಯುವಕ ಸಾವು

ಚಾಮರಾಜನಗರ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಚಾಮರಾಜನಗರ ತಾಲೂಕಿನ ಕೋಡಿಮೋಳೆ ಗ್ರಾಮದ ಚಿಕ್ಕನಾಗು ಎಂಬುವರ ಪುತ್ರ ಶಿವು (24) ಮೃತಪಟ್ಟ ಬೈಕ್ ಸವಾರ. ಕಾರ್ಯನಿಮಿತ್ತ ಶಿವು ಬೈಕ್‍ನಲ್ಲಿ ಕೋಡಿ ಮೋಳೆ ಚಂದಕವಾಡಿ ಕಡೆಗೆ ತೆರಳುತ್ತಿದ್ದ.

ಈ ವೇಳೆ ಚಂದಕವಾಡಿ ಗ್ರಾಮದ ಪೆಟ್ರೋಲ್ ಬಂಕ್ ಬಳಿ ಅದೇ ಮಾರ್ಗವಾಗಿ ಹೋಗುತ್ತಿದ್ದ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿ ಸಿತು. ಇದರಿಂದ ಕೆಳಕ್ಕೆ ಬಿದ್ದ ಶಿವು ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು ಸಂಚಾರಿ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ದೀಪಕ್ ತಿಳಿಸಿದರು.

ಕಾರು ಚಾಲನೆ ಮಾಡುತ್ತಿದ್ದವನನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.