ವಿರಾಜಪೇಟೆಯಲ್ಲಿ ಸಿಪಿಐ ಪ್ರತಿಭಟನೆ

ವಿರಾಜಪೇಟೆ: ಕೇಂದ್ರದ ಬಿಜೆಪಿ ಸರಕಾರ ಪೆಟ್ರೋಲ್, ಡೀಸಲ್, ಮತ್ತು ಅಡುಗೆ ಅನಿಲಗಳ ಬೆಲೆಯನ್ನು ಏರಿಸುತ್ತಿರುವುದನ್ನು ವಿರೋಧಿಸಿ ಸಿಪಿಐ. ಮತ್ತು ಸಿಪಿಐ[ಎಂ] ಪಕ್ಷದ ಕಾರ್ಯಕರ್ತರು ವಿರಾಜಪೇಟೆ ಪಟ್ಟಣದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಸಿಪಿಐನ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಸುನೀಲ್ ಅವರು ಪ್ರತಿಭಟನಾಕಾರರನ್ನುದ್ದೇಶಿಸಿ, ಕಳೆದ ನಾಲ್ಕುವರೆ ವರ್ಷಗಳಿಂದಲೂ ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸುತ್ತಿದ್ದು ಭಾಷಣದ ಮೂಲಕ ಜನರನ್ನು ಮೋಡಿ ಮಾಡುತ್ತಾ ಚುನಾವಣಾ ಸಂದರ್ಭ ನೀಡಿದ ಪ್ರಣಾಳಿಕೆ ಯಂತೆ ನಡೆದು ಕೊಳ್ಳದ ಪ್ರಧಾನಿ ಕೂಡಲೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ದರು. ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಸಮಿತಿಯ ಎ.ಸಿ.ಸಾಬು, ವಿ.ಆರ್.ರಜನಿಕಾಂತ್, ನಗರ ಸಮಿತಿಯ ಶಿವಪ್ಪ, ಕಟ್ಟಡ ಕಾರ್ಮಿಕ ಸಂಘದ ಮೋಹನ್, ಕಾಶಿಂ, ಸಿ.ಪಿ.ಐ.[ಎಂ]ನ ಜಿಲ್ಲಾ ಸಮಿತಿಯ ಎನ್.ಮಣಿ, ಹರಿದಾಸ್, ಹೆಚ್.ಜಿ.ಗಿರೀಶ್ ಮುಂತಾದವರು ಹಾಜರಿದ್ದರು.