ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಪುಡಿ ಪುಡಿಯಾದ ಇಟ್ಟಿಗೆಗೂಡಿನ ಪಶು ಆಸ್ಪತ್ರೆಯ ಶೀಟುಗಳು

ಮೈಸೂರು: ಗುರುವಾರ ಸಂಜೆ ಬಿದ್ದ ಆಲಿಕಲ್ಲು ಸಹಿತ ಭಾರೀ ಬಿರುಗಾಳಿ ಮಳೆಗೆ ಮೈಸೂರಿನ ಇಟ್ಟಿಗೆಗೂಡಿನ ಸರ್ಕಾರಿ ಪಶು ಚಿಕಿತ್ಸಾಲಯದ ಕಲ್ನಾರ್ ಶೀಟು ಗಳು ಒಡೆದು ಪುಡಿ ಪುಡಿಯಾಗಿವೆ. ಗಾಳಿಯ ರಭಸಕ್ಕೆ ಮೇಲೆದ್ದ ಶೀಟುಗಳು ಆಸ್ಪತ್ರೆಯ ಒಳಗೆ ಬಿದ್ದು ಪುಡಿಯಾದವು.

ಮಳೆಯ ನೀರಿನಿಂದ ಆಸ್ಪತ್ರೆಯೊಳಗಿನ ಕುರ್ಚಿ, ಮೇಜು, ಬೀರು ತೋಯ್ದು ಹೋಗಿವೆ. ಟೇಬಲ್ ಮೇಲಿನ ಹಾಸು ಗಾಜು ಒಡೆದಿದೆ. ಮಳೆಯಿಂದ ತೊಯ್ದು ಔಷಧಿಗಳು ಹಾಳಾಗಿವೆ. ಈ ವೇಳೆ ಆಸ್ಪತ್ರೆ ಯಲ್ಲಿ ಯಾರೂ ಇರಲಿಲ್ಲವಾದ್ದರಿಂದ ಪ್ರಾಣಾಪಾಯವಾಗಿಲ್ಲ. ಒಟ್ಟಾರೆ 50,000ಕ್ಕೂ ಹೆಚ್ಚಿನ ನಷ್ಟದ ಅಂದಾಜು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು `ಮೈಸೂರುಮಿತ್ರ’ನಿಗೆ ಪ್ರತಿಕ್ರಿಯಿಸಿದ ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಅಜಿತ್, ತಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ದ್ದೇನೆ. ಮಳೆ, ಗಾಳಿ, ಆಲಿಕಲ್ಲಿನ ಹೊಡೆತಕ್ಕೆ ಕಟ್ಟಡದ ಮೇಲಿನ ಶೀಟುಗಳು ಒಡೆದು ಪುಡಿ ಯಾಗಿವೆ. ಅದನ್ನು ಹೊರತುಪಡಿಸಿದರೆ ಬೇರೆ ಹಾನಿಆಗಿಲ್ಲ. ಕುರ್ಚಿ ಮೇಜುಗಳು ಮಳೆಯಿಂದ ಒದ್ದೆಯಾಗಿದೆಯಷ್ಟೆ. ದಾಖಲೆ ಮತ್ತು ಔಷಧಿಗಳನ್ನು ಬೀರುವಿನಲ್ಲಿ ಇಟ್ಟಿರುವುದರಿಂದ ಅವುಗಳಿಗೆ ಹಾನಿಯಾಗಿಲ್ಲ ಎಂದರು. 20 ಘಿ 50 ಅಳತೆಯ ಕಟ್ಟಡಕ್ಕೆ ಮತ್ತೇ ಹೊಸದಾಗಿ ಕಲ್ನಾರ್ ಶೀಟ್‍ಗಳು ಅಳವಡಿಸಲು ಜಿಪಂ ಸಿಇಓ ಬಳಿ ಪ್ರಸ್ತಾ ವನೆ ಸಲ್ಲಿಸಿ, ಅನುಮತಿ ಪಡೆಯಲಾಗು ವುದು. ಅನುಮತಿ ದೊರೆತೊಡನೆ ಆಸ್ಪತ್ರೆ ಕಟ್ಟಡಕ್ಕೆ ಹೊಸದಾಗಿ ಶೀಟ್ ಅಳವಡಿ ಸಲಾಗುವುದು ಎಂದು ಹೇಳಿದರು.