ಜೆಡಿಎಸ್-ಕಾಂಗ್ರೆಸ್ ಒಡಕೇ ಬಿಜೆಪಿ ಗೆಲುವಿಗೆ ವರದಾನ

ಮೈಸೂರು: ಜೆಡಿಎಸ್-ಕಾಂಗ್ರೆಸ್ ಮೇಲ್ನೋಟಕ್ಕೆ ಒಂದಾಗಿದ್ದರೂ ಕೆಳ ಹಂತದಲ್ಲಿರುವ ಒಡಕೇ ಮೋದಿಯವರು ಮತ್ತೆ ಪ್ರಧಾನಿಯಾಗಲು ಅನುಕೂಲ ವಾಗಲಿದೆ ಎಂದು ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು. ಮೈಸೂರಿನ ಟಿ.ಕೆ.ಬಡಾವಣೆ ಯಲ್ಲಿ ಟೀಮ್ ಮೋದಿ ಕಾರ್ಯಾಲಯವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಜೆಡಿಎಸ್‍ನವರಿಗೆ ಕಾಂಗ್ರೆಸ್‍ನ ವಿರೋಧವಿದ್ದು, ಮೋದಿಯವರಿಗೆ ಮತ ನೀಡುತ್ತಾರೆ. ಇದೇ ಬಿಜೆಪಿಗೆ ಲಾಭವಾಗುತ್ತದೆ ಎಂದರು.

ರಾಜ್ಯದಲ್ಲಿ ಬಿಜೆಪಿ 22 ಸ್ಥಾನ ಗೆಲ್ಲುವುದು ಖಚಿತವಾಗಿದ್ದು, ಮತ್ತೆ ಮೋದಿಯವರು ಪ್ರಧಾನಿಯಾಗುತ್ತಾರೆ. ಕಳೆದ ಐದು ವರ್ಷದಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದ ಸಾಧನೆಯನ್ನು ಜನತೆಯ ಮನೆ ಬಾಗಿಲಿಗೆ ಕೊಂಡೊಯ್ಯುವ ದೃಷ್ಟಿಯಿಂದ ಟೀಮ್ ಮೋದಿ ಕಾರ್ಯಾಲಯವನ್ನು ತೆರೆಯಲಾಗಿದೆ. ಈ ಕಾರ್ಯಾಲಯದಿಂದ ಬಿಜೆಪಿಗಷ್ಟೇ ಅಲ್ಲದೆ ಇಡೀ ರಾಷ್ಟ್ರಕ್ಕೆ ಅನುಕೂಲವಾಗಲಿದೆ ಎಂದರು.

ಸಾಕಷ್ಟು ಮಂದಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಬೇಕು ಎಂದುಕೊಂಡಿರುತ್ತಾರೆ. ಆದರೆ, ಅವರಿಗೆ ಎಲ್ಲಿ ಹೋಗಿ ಏನು ಮಾಡಬೇಕು ಎಂದು ತಿಳಿದಿರುವುದಿಲ್ಲ. ಆದ್ದರಿಂದ ರಾಜ್ಯದ ಪ್ರತಿ ಕ್ಷೇತ್ರದಲ್ಲಿಯೂ ಟೀಮ್ ಮೋದಿ ಕಾರ್ಯಾಲಯವನ್ನು ಪ್ರಾರಂಭ ಮಾಡುತ್ತಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮ ದಲ್ಲಿ ಮಹೇಂದ್ರ, ಚಂದ್ರಶೇಖರ್, ಪ್ರಶಾಂತ್, ಸಮರ್ಥ್, ಸುನೀಲ್, ವಿಷ್ಣು ಮತ್ತು ನಾರಾಯಣ್ ಸೇರಿದಂತೆ ಹಲವಾರು ಟೀಮ್ ಮೋದಿ ಕಾರ್ಯಕರ್ತರು ಭಾಗವಹಿಸಿದ್ದರು.