ಸಾಲಬಾಧೆ: ರೈತ ಆತ್ಮಹತ್ಯೆ

ಚನ್ನರಾಯಪಟ್ಟಣ: ಸಾಲಬಾಧೆಯಿಂದ ಬೇಸತ್ತ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬಳದರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಚನ್ನಕೇಶವ(46) ಮೃತ ರೈತ. ಗುರುವಾರ ಮುಂಜಾನೆ ಯೇ ಜಮೀನಿನ ಕೆಲಸಕ್ಕೆ ತೆರಳಿ ಅಲ್ಲೇ ವಿಷ ಸೇವಿಸಿದ್ದರು. ಬೆಳಗಿನ ಉಪಹಾರ ಸೇವನೆಗೆ ಮನೆಗೆ ಬರದಿದ್ದರಿಂದ ಪತ್ನಿ ಮಂಜುಳಾ ಜಮೀನಿಗೆ ತೆರಳಿ ನೋಡಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಮೃತರು ಉದಯಪುರ ಕಾವೇರಿ ಗ್ರಾಮೀಣ ಬ್ಯಾಂಕ್‍ನಲ್ಲಿ 1.50 ಲಕ್ಷ ರೂ. ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಲಕ್ಷ ರೂ. ಸಿಂಡಿಕೇಟ್ ಬ್ಯಾಂಕ್‍ನಲ್ಲಿ 50 ಸಾವಿರ ರೂ. ಸೇರಿದಂತೆ 6 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ. ಮೃತರಿಗೆ ಇಬ್ಬರು ಪುತ್ರಿಯರಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.