ಮೈಸೂರು ಆಕಾಶವಾಣಿಯಲ್ಲಿ `ಸಂಗೀತ ಸನ್ನಿದಿ ನಾದಾಲಯ’

ಮೈಸೂರು, ಡಿ.19(ಪಿಎಂ)- ಒಂದು ಕಾಲದಲ್ಲಿ ಸಂಗೀತ ದಿಗ್ಗಜರು ನುಡಿ ಸುತ್ತಿದ್ದ ಬಗೆಬಗೆಯ ವಾದ್ಯಗಳು ಅಲ್ಲಿ ಅನಾವರಣಗೊಂಡಿವೆ. ಹೌದು, ಮೈಸೂರು ಆಕಾಶವಾಣಿಯ ಆರಂಭದ ದಿನಗಳಲ್ಲಿ ಬಳಸಲ್ಪಡುತ್ತಿದ್ದ ಸಂಗೀತ ವಾದ್ಯಗಳ ವೈವಿಧ್ಯಮಯ ನೋಟವನ್ನು ಇದೀಗ ಕಣ್ತುಂಬಿಕೊಳ್ಳಬಹುದು. ಆಕಾಶವಾಣಿಯ ಆವರಣದಲ್ಲಿ ಇಂತಹ ವಿಶಿಷ್ಟ ಗ್ಯಾಲರಿ ಗುರುವಾರ ಉದ್ಘಾಟನೆಗೊಂಡಿತು.

ಬಗೆ ಬಗೆಯ ವೀಣೆ, ತರಾವರಿ ತಬಲ, ಗಿಟಾರ್, ಪಿಟೀಲು ಸೇರಿದಂತೆ ಸಂಗೀತ ವಾದ್ಯಗಳ ಲೋಕವೇ ಅಲ್ಲಿ ಸೃಷ್ಟಿಯಾ ಗಿದ್ದು, ಆಕಾಶವಾಣಿ ಆರಂಭದ ದಿನ ಗಳಲ್ಲಿ ಬಳಕೆ ಮಾಡುತ್ತಿದ್ದ ಈ ಸಂಗೀತ ವಾದ್ಯಗಳ ಸಂರಕ್ಷಣೆ ಹಿನ್ನೆಲೆಯಲ್ಲಿ `ಸಂಗೀತ ಸನ್ನಿದಿ ನಾದಾಲಯ’ ಶೀರ್ಷಿಕೆ ಯಡಿ ಗ್ಯಾಲರಿ ನಿರ್ಮಿಸಲಾಗಿದೆ.

ಇದರ ಜೊತೆಗೆ ಮೈಸೂರಿನಲ್ಲಿ ಸಂಗೀತ ಪರಂಪರೆಗೆ ಅಪೂರ್ವ ಕೊಡುಗೆ ನೀಡಿದ 15ಕ್ಕೂ ಹೆಚ್ಚು ಖ್ಯಾತ ಗಾಯಕರ ಭಾವಚಿತ್ರಗಳೂ ಇಲ್ಲಿ ಅನಾವರಣಗೊಂಡಿವೆ. ವೈವಿಧ್ಯಮಯ ವಾದ್ಯಗಳು ಹಾಗೂ ಪ್ರಸಿದ್ಧ ಸಂಗೀತ ಕಲಾವಿದರ ಭಾವಚಿತ್ರಗಳನ್ನು ಒಳಗೊಂಡ ಈ ಗ್ಯಾಲರಿ ನೋಡುಗರ ಕಣ್ಮನ ಸೆಳೆಯುತ್ತಿದೆ. ಶತಮಾನದ ಅತ್ಯಂತ ಪ್ರಸಿದ್ಧ ಕಲಾವಿದರಾದ ವೀಣೆ ಶೇಷಣ್ಣ, ಎಂ.ಎಸ್.ಸುಬ್ಬಲಕ್ಷ್ಮಿ, ವಾಸುದೇವಾ ಚಾರ್ಯ, ಟಿ.ಚೌಡಯ್ಯ, ಮೈಸೂರು ವಿ.ದೊರೆಸ್ವಾಮಿ ಅಯ್ಯಂಗಾರ್ ಸೇರಿ ದಂತೆ ಮೈಸೂರು ಸಂಗೀತ ಪರಂಪರೆ ಯಲ್ಲಿ ಅನನ್ಯ ಕೊಡುಗೆ ನೀಡಿದ ಕಲಾ ವಿದರ ಭಾವಚಿತ್ರ ಇಲ್ಲಿ ಕಾಣಸಿಗಲಿವೆ.

ನಾದಾಲಯ ಗ್ಯಾಲರಿ ಉದ್ಘಾಟಿಸಿದ ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತ ನಾಡಿ, ನಮ್ಮ ತಾತ ಜಯಚಾಮರಾಜ ಒಡೆಯರ್ ಅವರು ಸಂಗೀತ ಕ್ಷೇತ್ರದಲ್ಲಿ ಬಹಳ ಆಸಕ್ತಿ ಉಳ್ಳವರಾಗಿದ್ದರು. ಆಕಾಶ ವಾಣಿ ಜೊತೆಗೆ ಅವಿನಾಭಾವ ಒಡನಾಟ ಹೊಂದಿದ್ದರು. ಆಕಾಶವಾಣಿ ಹಾಗೂ ಸಂಗೀತ ಕ್ಷೇತ್ರಕ್ಕೆ ಅಗತ್ಯ ಸಹಕಾರ ನೀಡಲು ಅರಮನೆ ಸದಾ ಸಿದ್ಧವಿರುತ್ತದೆ ಎಂದು ತಿಳಿಸಿದರು. ಆಕಾಶವಾಣಿಯ ಹಿರಿಯ ಕಲಾವಿದೆ ಡಾ.ಹೆಚ್.ಆರ್. ಲೀಲಾವತಿ ಮಾತನಾಡಿ, ಈ ಸಂಸ್ಥೆ ನನ್ನಂತಹ ಅದೆಷ್ಟೋ ಕಲಾವಿದರ ಬಾಳಿಗೆ ಬೆಳಕಾಗಿದೆ. ಜೊತೆಗೆ ಮಾನವೀಯ ಮೌಲ್ಯ ಬಿತ್ತುವ ಕಾರ್ಯ ಕ್ರಮಗಳು ಇಲ್ಲಿ ರೂಪುಗೊಂಡಿವೆ. ಆಕಾಶವಾಣಿ ಜನರ ಮನಸಿನಲ್ಲಿ ಭಾವ ಲಹರಿ ಅರಳಿಸುತ್ತ ಮುಂದೆ ಸಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕ ಎಸ್.ಎಸ್.ಉಮೇಶ್ ಮಾತ ನಾಡಿ, ಮೈಸೂರು ಆಕಾಶವಾಣಿ ಮೈಸೂರು ಮಹಾರಾಜರ ಕೊಡುಗೆಯಾಗಿದೆ. ಜೊತೆಗೆ ಸಂಗೀತ ಪರಂಪರೆಗೂ ಮಹಾ ರಾಜರು ಅಪಾರ ಉತ್ತೇಜನ ನೀಡಿದ್ದಾರೆ ಎಂದು ಸ್ಮರಿಸಿದರು. ಆಕಾಶವಾಣಿ ಮುಖ್ಯಸ್ಥ ಸುನಿಲ್ ಭಾಟಿಯಾ, ತಾಂತ್ರಿಕ ವಿಭಾಗದ ಸಹ ನಿರ್ದೇಶಕ ರಾಮಾಂಜ ನಪ್ಪ ಮತ್ತಿತರರು ಹಾಜರಿದ್ದರು.