ನಮ್ಮ ಶಾಸಕರು ನಮ್ಮ ವಿಶ್ವಾಸದಲ್ಲಿದ್ದಾರೆ

ಹಾಸನ: ರಮೇಶ್ ಜಾರಕಿಹೊಳಿ ಕಾಂಗ್ರೆಸ್‍ಗೆ ಗುಡ್ ಬೈ ಹೇಳುವ ವಿಚಾರ ಹೊಸದೇನಲ್ಲ. ನಮ್ಮ ಪಕ್ಷದ ಎಲ್ಲಾ ಶಾಸಕರ ವಿಶ್ವಾಸ ಪಡೆಯುವ ಕೆಲಸ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಬಿಡ್ತಾರೇ, ಬಿಡ್ತಾರೆ ಎನ್ನುವ ಸುದ್ದಿ ಹೊಸದೇನು ಅಲ್ಲ. ಸರ್ಕಾರ ಬೀಳಿಸಲು ಬಿಜೆಪಿಯ ಎಲ್ಲಾ ನಾಯಕರು ಕಾಯುತ್ತಿದ್ದಾರೆ. ನಮ್ಮ ಶಾಸಕರನ್ನು ಉಳಿಸಿ ಕೊಳ್ಳೋ ಕೆಲಸ ನಾವು ಮಾಡುತ್ತೇವೆ ಎಂದು ತಿಳಿಸಿ ದರು. ನಾನು ಡ್ರಾಮಾ ಮಾಡುವವರನ್ನು ಹಿಡಿದುಕೊಳ್ಳಲು ಆಗುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹೆಚ್.ಡಿ.ಕುಮಾರಸ್ವಾಮಿ, ಇದು ಇಂತಹವರ ಬಗ್ಗೆ ಚರ್ಚೆ ನಡೆಸುವ ಕಾಲವಲ್ಲ. ರಾಜ್ಯದಲ್ಲಿ ಬರಗಾಲ ಇದೆ. ಆ ಬಗ್ಗೆ ಚರ್ಚಿಸಲು ಏ. 26ರ ನಂತರ ಅಧಿಕಾರಿಗಳ ಸರಣಿ ಸಭೆ ನಡೆಸುತ್ತೇನೆ ಎಂದು ತಿಳಿಸಿದರು. ನನ್ನ ಆಡಳಿತದ ಬಗ್ಗೆ ಮೈತ್ರಿ ಶಾಸಕರು ಮುನಿಸಿಕೊಂಡಿ ದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಯಾರು ಹೇಳಿದರೋ ಗೊತ್ತಿಲ್ಲ. ಬಿಜೆಪಿಯವರು ಮೇ 23ರ ನಂತರ ಸರ್ಕಾರ ಬೀಳಲಿದೆ ಎಂದು ಗಡುವು ಕೊಟ್ಟಿದ್ದಾರೆ. ಯಾರು ಏನೇ ಹೇಳಿದ್ದಾರೆ ಅನ್ನೋದು ಮುಖ್ಯವಲ್ಲ. ಕಾಂಗ್ರೆಸ್-ಜೆಡಿಎಸ್ ನಾಯಕರು ಸೇರಿ ರಚನೆಯಾಗಿರುವ ಈ ಸರ್ಕಾರ ಸುಭದ್ರವಾಗಿದೆ. ಸುಭದ್ರವಾಗಿಯೇ ನಡೆಯುತ್ತದೆ. ನಾನು ನನ್ನ ಜವಾಬ್ದಾರಿ ನಿರ್ವಹಿಸುವೆ ಎಂದರು.

ಮೈತ್ರಿ ಅಭ್ಯರ್ಥಿಗಳು ಗೆಲ್ಲುತ್ತಾರೆ: ರಾಜ್ಯದಲ್ಲಿನ ಎರಡನೇ ಹಂತದ ಲೋಕಸಭಾ ಚುನಾವಣಾ ಮತದಾನ ಇಂದು ನಡೆದಿದೆ. ಇದರಲ್ಲಿ ಶಿವಮೊಗ್ಗ ಸೇರಿ ಉಳಿದ ಮೂರು ಕಡೆ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಜೊತೆಗೆ 11 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳೂ ಗೆಲ್ಲುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪಾರ್ಥಿವ ಶರೀರ ತರಿಸಲು ಕ್ರಮ: ಶ್ರೀಲಂಕಾ ಬಾಂಬ್ ಸ್ಪೋಟದಲ್ಲಿ ರಾಜ್ಯದ ಹಲವು ಪ್ರವಾಸಿಗರು ಸಾವಿಗೀಡಾಗಿದ್ದಾರೆ. ಈ ಬಗ್ಗೆ ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಎಲ್ಲಾರ ಪಾರ್ಥಿವ ಶರೀರಗಳನ್ನು ರಾಜ್ಯಕ್ಕೆ ತರಲಾಗುವುದು. ಎಲ್ಲಾ ದೇಹಗಳನ್ನು ಒಮ್ಮೆಗೇ ತರಲು ಸಾಧ್ಯವಿಲ್ಲ. ಆದರೂ ಸರ್ಕಾರದ ಕಡೆಯಿಂದ ಎಲ್ಲಾ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು.