ಸರಕಾರ ಉಳಿಯುವುದಾದರೆ ಸಿಎಂ ಹುದ್ದೆ ತೊರೆಯಲು ಸಿದ್ಧ: ಹೆಚ್‍ಡಿಕೆ

ಬೆಂಗಳೂರು: ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಹೊರಬಿದ್ದ ಬಳಿಕವೂ ಸರಕಾರ ಉಳಿಸಿಕೊಳ್ಳುವ ಕಸರತ್ತನ್ನು ದೋಸ್ತಿ ಪಕ್ಷಗಳು ಮುಂದುವರಿಸಿವೆ. ದಿಢೀರ್ ಎಂಬಂತೆ ಮಹತ್ವದ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅನಿವಾರ್ಯ ಎನಿಸಿದರೆ ನಾಯಕತ್ವ ಬದಲಾ ವಣೆ ಮಾಡಬಹುದು ಎಂಬ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ದೊಮ್ಮಲೂರು ಬಳಿ ಇರುವ ಸಚಿವ ಕೆ.ಜೆ.ಜಾರ್ಜ್ ಅವರ ನಿವಾಸ ದಲ್ಲಿ ಬುಧವಾರ ತಡರಾತ್ರಿಯವರೆಗೂ ನಡೆದ ದೋಸ್ತಿ ಪಕ್ಷಗಳ ನಾಯಕರ ಸಭೆಯಲ್ಲಿ ಕುಮಾರ ಸ್ವಾಮಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಅವರ ಈ ಮಾತಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರೂ ಸಾಕ್ಷಿಯಾದರು.

ಏನೇ ಆಗಲಿ, ಮೈತ್ರಿ ಸರಕಾರ ಇಲ್ಲಿಗೇ ಕೊನೆ ಗೊಳ್ಳಬಾರದು. ಇನ್ನೂ 4 ವರ್ಷ ಗಳ ಕಾಲ ಮುಂದುವರಿಯಬೇಕು. ಅಗತ್ಯ ಎನಿಸಿದರೆ ಅಧಿಕಾರದಿಂದ ಕೆಳಗಿಳಿಯಲು ನಾನು ಸಿದ್ಧ.

ಕಾಂಗ್ರೆಸ್‍ನಿಂದಲೇ ಯಾರಾದರೂ ಮುಖ್ಯ ಮಂತ್ರಿ ಸ್ಥಾನ ವಹಿಸಿಕೊಳ್ಳಬಹುದು. ಕಾಂಗ್ರೆಸ್ ಯಾರನ್ನೇ ಮುಖ್ಯಮಂತ್ರಿ ಮಾಡಿದರೂ ನಮ್ಮ ಅಭ್ಯಂತರವಿಲ್ಲ ಎಂದು ಕುಮಾರಸ್ವಾಮಿ ಹೇಳಿ ದರು. ಆದರೆ, ನಾನು ಈ ತೀರ್ಮಾನ ಕೈಗೊಂಡ ಬಳಿಕವಾದರೂ ಅತೃಪ್ತರು ಮುಂಬೈನಿಂದ ವಾಪಸ್ ಬರುವಂತಾಗಬೇಕು ಎಂದು ಸಭೆಯಲ್ಲಿ ಷರತ್ತು ವಿಧಿಸಿದರು. ಆದರೆ, ಹೆಚ್‍ಡಿಕೆ ಅವರು ಕಡೆಗಳಿಗೆ ಯಲ್ಲಿ ಮುಂದಿಟ್ಟ ಈ ಪ್ರಸ್ತಾವಕ್ಕೆ ಕಾಂಗ್ರೆಸ್ ನಾಯಕರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿಲ್ಲ ಎಂದು ತಿಳಿದುಬಂದಿದೆ. ಈ ಹಂತದಲ್ಲಿ ನಾಯ ಕತ್ವ ಬದಲಾವಣೆ ಅಪ್ರಸ್ತುತ. ಕುಮಾರಸ್ವಾಮಿ ವಿಶ್ವಾಸಮತ ಯಾಚನೆಗೆ ಮುಂದಾಗಿದ್ದಾರೆ. ಹಾಗಾಗಿ, ಈಗ ಅವರದೇ ನಾಯಕತ್ವದಲ್ಲಿ ಆ ಪ್ರಕ್ರಿಯೆ ಮುಂದುವರಿಯಲಿ. ಸದ್ಯದ ಮಟ್ಟಿಗೆ ಅದೇ ಸೂಕ್ತ. ಏನಾದರೂ ಪವಾಡ ನಡೆದು ಮ್ಯಾಜಿಕ್ ನಂಬರ್ ಗಳಿಸಲು ಸಾಧ್ಯವಾದರೆ ಹೆಚ್‍ಡಿಕೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಇಲ್ಲದೇ ಹೋದರೆ ಪಕ್ಷದ ಹಿತದೃಷ್ಟಿಯಿಂದ ಮುಂದಿನ ನಿಲುವು ತೆಗೆದುಕೊಳ್ಳುವುದು ಒಳಿತು ಎಂಬ ನಿರ್ಧಾರ ಕಾಂಗ್ರೆಸ್ ನಾಯಕರದ್ದಾಗಿದೆ. ಈ ಮಧ್ಯೆ ಕುಮಾರ ಕೃಪಾ ಅತಿಥಿ ಗೃಹದಲ್ಲೂ ಕಾಂಗ್ರೆಸ್-ಜೆಡಿಎಸ್ ನಾಯಕರು ಮತ್ತೊಂದು ಸುತ್ತಿನ ಸಭೆ ನಡೆಸಿದರು. ಸಂಜೆ ವೇಳೆಗೆ ರೆಸಾರ್ಟ್‍ಗೆ ಭೇಟಿ ನೀಡಿದ ಸಿಎಂ ಹೆಚ್‍ಡಿಕೆ ಅಲ್ಲಿ ಕಾಂಗ್ರೆಸ್ ಶಾಸಕರ ಜೊತೆ ಮಾತುಕತೆ ನಡೆಸಿದರು. ನಂತರ ಜೆಡಿಎಸ್ ಶಾಸಕರು ತಂಗಿರುವ ರೆಸಾರ್ಟ್‍ಗೂ ತೆರಳಿ ಮಾತುಕತೆ ನಡೆಸಿದರು.