ಶ್ರೀ ಗುರುಬಸವೇಶ್ವರಸ್ವಾಮಿ ದೇಗುಲ ಕಳಶಾರೋಹಣ

ಅರಸೀಕೆರೆ: ತಾಲೂಕಿನ ಕಣಕಟ್ಟೆ ಹೋಬಳಿ ಯರಿಗೇನಹಳ್ಳಿಯಲ್ಲಿ ಶ್ರೀ ಗುರುಬಸವೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರವಾಗಿದ್ದು, ಕಳಶಾರೋ ಹಣ ಹಾಗೂ ವೀರಭದ್ರೇಶ್ವರ ಸ್ವಾಮಿಯ ಕೆಂಡೋತ್ಸವ ಕಾರ್ಯಕ್ರಮ ಬಲು ಭಕ್ತಿಭಾವದೊಂದಿಗೆ ಜರುಗಿತು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಪಾಂಡೋಮಟ್ಟಿಯ ವಿರಕ್ತ ಮಠದ ಶ್ರೀ ಗುರುಬಸವ ಸ್ವಾಮೀಜಿ, ಆಧ್ಯಾತ್ಮಿಕ ಚಿಂತನೆಯ ತಳಹದಿಯಲ್ಲಿ ಮಠ ಮಂದಿರ ಗಳನ್ನು ನಿರ್ಮಿಸಲಾಗುತ್ತಿದೆ. ಇವುಗಳು ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗಬೇಕೇ ಹೊರತು, ಸಂಘರ್ಷದ ಕಿಡಿ ಹೊತ್ತಿಸುವ ತಾಣಗಳಾಗಬಾರದು ಎಂದರು.

ಸಮಾಜಮುಖಿ ಕಾರ್ಯಗಳನ್ನು ಮಾಡು ವಾಗ ಸ್ವಾರ್ಥ ಹಾಗೂ ಸಂಕುಚಿತ ಬುದ್ಧಿ ಮೊದಲು ತೊಲಗಬೇಕು. ಧರ್ಮದ ಹೆಸರಿ ನಲ್ಲಿ ಸಂಘರ್ಷದ ಕಿಡಿ ಹೊತ್ತಿಸುವುದು ಅತ್ಯಂತ ಅಪಾಯಕಾರಿ ಎಂದು ಹೇಳಿದರು.

ಇತ್ತೀಚೆಗೆ ಕೆಲ ದೃಶ್ಯಮಾಧ್ಯಮಗಳು ತಮ್ಮ ಸ್ಟುಡಿಯೋಗೆ ಜ್ಯೋತಿಷಿಗಳನ್ನು ಕರೆಸಿ ಭವಿಷ್ಯ ಹೇಳಿಸುವ ನೆಪದಲ್ಲಿ ಮೌಢ್ಯ ಹರಡುತ್ತಾ, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ. ಇಂತಹ ಅಜ್ಞಾನ, ಮೌಢ್ಯಗಳನ್ನು ಹೊರ ಹಾಕಿ ಮುಂದಿನ ಪೀಳಿಗೆಗೆ ನಾವೆಲ್ಲರೂ ದಾರಿ ದೀಪವಾಗಬೇಕು ಎಂದು ಉಪನ್ಯಾಸಕ ಡಾ.ಕೆ.ಎಸ್.ಹರಶಿವಮೂರ್ತಿ ಹೇಳಿದರು.
ಮಾಡಾಳು ನಿರಂಜನ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಡಿ.ಎಂ.ಕುರ್ಕೆ ವಿರಕ್ತ ಮಠದ ಶ್ರೀ ಶಶಿಶೇಖರ ಸಿದ್ದಬಸವ ಸ್ವಾಮೀಜಿ, ಜಿಪಂ ಸದಸ್ಯ ಮಾಡಾಳು ಸ್ವಾಮಿ, ಕೆಪಿಸಿಸಿ ಸದಸ್ಯ ಹಿರಿಯೂರು ರೇವಣ್ಣ, ಜಿಪಂ ಮಾಜಿ ಸದಸ್ಯ ಕಲ್ಲುಸಾದರಹಳ್ಳಿ ಶಿವಮೂರ್ತಿ, ಜಯಪ್ಪ, ಶ್ಯಾಮ್‍ಸುಂದರ್, ತಾ.ಪಂ. ಸದಸ್ಯ ಸಿ.ಸಿ.ಮಹೇಶ್ವರಪ್ಪ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.