ರಾಜ್ಯ ಬಜೆಟ್: ಕೊಡಗು ಜಿಲ್ಲೆಗೆ ನೀಡದ ವಿಶೇಷ ಅನುದಾನ

  • ಕೊಡಗಿನಾದ್ಯಂತ ಸಾರ್ವಜನಿಕರ ಅಸಮಾಧಾನ
  • 450 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ 100 ಕೋಟಿ ರೂ.
  • ಹಾರಂಗಿ ಜಲಾನಯನ ಪುನಶ್ಚೇತನಕ್ಕೆ 75 ಕೋಟಿ ರೂ.

ಮಡಿಕೇರಿ: ರಾಜ್ಯ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಕೊಡಗಿನ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡದಿರುವ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಅಸಮಾಧಾನ ವ್ಯಕ್ತಗೊಂಡಿದೆ. ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರದ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಮಾತ್ರವೇ 2 ಕೋಟಿ. ರೂ.ಗಳನ್ನು ಮೀಸಲಿರಿಸಲಾ ಗಿದೆ. ಸಂತ್ರಸ್ತರ ಮನೆಗಳ ನಿರ್ಮಾಣ ಕಾಮ ಗಾರಿಗೆ ವೇಗ ನೀಡುವ ಯೋಜನೆಗಳನ್ನು ಕೂಡ ಬಜೆಟ್‍ನಲ್ಲಿ ಘೋಷಿಸದಿರುವುದು ಸಂತ್ರಸ್ತರ ಅಸಮಾಧಾನಕ್ಕೂ ಕಾರಣವಾಗಿದೆ.

ಜಿಲ್ಲೆಗೆ ಸಿಕ್ಕಿದ್ದೇನು?: ರಾಜ್ಯ ಬಜೆಟ್‍ನಲ್ಲಿ ಮಡಿಕೇರಿಯಲ್ಲಿರುವ ಮೆಡಿಕಲ್ ಕಾಲೇಜು ಆವರಣದಲ್ಲಿ 450 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸಲು 100 ಕೋಟಿ ರೂ. ಗಳನ್ನು ಘೋಷಿಸಲಾಗಿದೆ.

ವಿರಾಜಪೇಟೆ ಬಾಳುಗೋಡು ಕೊಡವ ಸಮಾಜದ ಹಾಕಿ ಕ್ರೀಡಾಂಗಣದ ಅಭಿವೃದ್ದಿಗೆ ಬಜೆಟ್‍ನಲ್ಲಿ 5 ಕೋಟಿ ರೂ. ಗಳ ಅನುದಾನ ಒದಗಿಸಲಾಗಿದೆ.ಕೊಡಗು ಜಿಲ್ಲೆಯ ಕಂದಾಯ ವಿಭಾ ಗಕ್ಕೆ ಒಳಪಟ್ಟ ಭೂಮಿಯನ್ನು ದ್ರೋಣ್ ಮೂಲಕ ಸರ್ವೇ ನಡೆಸಲು ಬಜೆಟ್‍ನಲ್ಲಿ ಯೋಜನೆ ರೂಪಿಸಲಾಗಿದೆ.

ಕೊಡವ ಸಮಾಜದ ಸರ್ವತೋ ಮುಖ ಅಭಿವೃದ್ಧಿಗಾಗಿ 10 ಕೋಟಿ ರೂಪಾಯಿಗಳನ್ನು ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿದೆ.

ಕೊಡವ, ತುಳು ಮತ್ತು ಕೊಂಕಣಿ ಭಾಷೆಗಳಲ್ಲಿ ತಯಾರಾಗುವ ಚಲನ ಚಿತ್ರ ಗಳನ್ನು ಪ್ರೋತ್ಸಾಹಿಸಲು ವಿಶೇಷ ಕಾರ್ಯ ಕ್ರಮ ಅಡಿಯಲ್ಲಿ 1 ಕೋಟಿ ರೂ. ಅನು ದಾನ ಒದಗಿಸಲು ಬಜೆಟ್‍ನಲ್ಲಿ ಘೋಷಿಸ ಲಾಗಿದೆ. ಮಡಿಕೇರಿ, ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಬೀದರ್‍ನಲ್ಲಿ ಹೊಸ ಕ್ರೀಡಾ ವಸತಿ ನಿಲಯಗಳ ನಿರ್ಮಾಣ ಕ್ಕಾಗಿ 12.5 ಕೋಟಿ ರೂ.ಗಳನ್ನು ಒದಗಿಸಲು ಬಜೆಟ್‍ನಲ್ಲಿ ನಿರ್ಧರಿಸಲಾಗಿದೆ.

ಹಾರಂಗಿ ಜಲಾನಯನ ಪ್ರದೇಶ ಹಾಗೂ ನದಿ ಪಾತ್ರದ ಪುನಶ್ಚೇತನ ಕಾಮಗಾರಿಗೆ 75 ಕೋಟಿ. ರೂ.ಗಳ ಅನುದಾನ ಒದಗಿಸು ವುದಾಗಿ ಬಜೆಟ್‍ನಲ್ಲಿ ಮುಖ್ಯಮಂತ್ರಿ ಕುಮಾ ರಸ್ವಾಮಿ ಘೋಷಿಸಿದ್ದಾರೆ.

ಈಡೇರದ ಬೇಡಿಕೆ: ಕೊಡಗು ಜಿಲ್ಲೆಯ 3 ತಾಲೂಕುಗಳನ್ನು ಒಳಗೊಂಡಂತೆ ಹೆಚ್ಚು ವರಿ 2 ತಾಲೂಕುಗಳನ್ನು ರಚನೆ ಮಾಡ ಬೇಕೆನ್ನುವ ಬೇಡಿಕೆಗೆ ಬಜೆಟ್‍ನಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಜಿಲ್ಲೆಯ ಜನರ ಹಲವು ದಶಕಗಳ ಬೇಡಿಕೆಯಾದ ಕುಶಾಲನಗರ ಮತ್ತು ಪೊನ್ನಂಪೇಟೆ ತಾಲೂಕು ರಚನೆಯ ಬಗ್ಗೆ ಬಜೆಟ್‍ನಲ್ಲಿ ಯಾವುದೇ ಪ್ರಸ್ತಾಪವಾಗಿಲ್ಲ. ತಾಲೂಕು ರಚ ನೆಗಾಗಿ ಈ ಹಿಂದೆ ನಡೆದ ಹೋರಾಟ ಗಳಿಗೂ ಬಜೆಟ್‍ನಲ್ಲಿ ಸ್ಪಂದನೆ ಕಂಡು ಬಂದಿಲ್ಲ. ಹೀಗಾಗಿ ತಾಲೂಕು ರಚನೆಯ ಘೋಷಣೆಯಾಗುವ ನಿರೀಕ್ಷೆ ಹೊಂದಿ ದ್ದವರಿಗೆ ನಿರಾಶೆಯಾಗುವಂತಾಗಿದೆ.

ವಿಶೇಷ ಪ್ಯಾಕೇಜ್ ಇಲ್ಲ: ಸಮ್ಮಿಶ್ರ ಸರಕಾರದಿಂದ ಮಂಡನೆಯಾದ 2 ಲಕ್ಷ ಕೋಟಿ ರೂ.ಗಳ ಬಜೆಟ್‍ನಲ್ಲಿ ಕೊಡಗು ಜಿಲ್ಲೆಗೆ ಯಾವುದೇ ವಿಶೇಷ ಪ್ಯಾಕೇಜ್ ಘೋಷಣೆಯಾಗಿಲ್ಲ. ಈ ಹಿಂದಿನ ಸರಕಾರಗಳು ಕೊಡಗು ಜಿಲ್ಲೆಯ ಅಭಿವೃದ್ಧಿಗಾಗಿ ಬಜೆಟ್‍ನಲ್ಲಿ ವಿಶೇಷ ಪ್ಯಾಕೇಜ್‍ಗಳನ್ನು ಘೋಷಿಸಿದ್ದವು. ಆರ್ಥಿಕ ಬೆಳೆಗಳ ಬಗ್ಗೆಯೂ ಯಾವುದೇ ಪ್ರಸ್ತಾಪ ಮಾಡದಿರುವುದು ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ. ಅತಿಯಾದ ಮಳೆಯಿಂದ ಹಾನಿಗೀಡಾದ ರಸ್ತೆಗಳ ದುರಸ್ಥಿಗೂ ಬಜೆಟ್‍ನಲ್ಲಿ ವಿಶೇಷ ಅನುದಾನ ಮೀಸಲಿಟ್ಟಿಲ್ಲ.