ಸೆ. 21ರಿಂದ ಮೈಸೂರು ವಿಜಯ ವಿಠಲ ಶಾಲಾ ಸಭಾಂಗಣದಲ್ಲಿ ಸರಳ ಯೋಗಾಸನ ಶಿಬಿರ

ಮೈಸೂರು: ಮೈಸೂರಿನ ವಿಜಯವಿಠಲ ಶಾಲೆಯ ಸಭಾಂಗಣದಲ್ಲಿ ಸೆ.21ರಿಂದ 30ರವರೆಗೆ ಬೆಂಗಳೂರಿನ ಆರ್.ಟಿ.ನಗರದ ಓಂ ಯೋಗ ಪ್ರತಿಷ್ಠಾನವು ಪ್ರಾಣಾಯಾಮ ಹಾಗೂ ಸರಳ ಯೋಗಾಸನ ಶಿಬಿರವನ್ನು ಆಯೋಜಿಸಿದೆ ಎಂದು ಯೋಗಗುರು ಪ್ರಹ್ಲಾದ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ಖಾಯಿಲೆಗಳಿಗೆ ರಾಮಬಾಣವಾಗಿರುವ ಸನಾತನ ಯೋಗ ಪದ್ಧತಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಓಂ ಯೋಗ ಪ್ರತಿಷ್ಠಾನವು ಈ ಶಿಬಿರವನ್ನು ಏರ್ಪಡಿಸಿದೆ. ಸುಮಾರು 400ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಗ್ಯಾಸ್ಟ್ರಿಕ್, ಮಧುಮೇಹ, ರಕ್ತದೊತ್ತಡ, ಆಸ್ತಮಾ, ಮೈಗ್ರೇನ್, ಅಜೀರ್ಣ, ಚರ್ಮದ ಕಾಯಿಲೆ, ಕೀಲು ನೋವು, ಥೈರಾಯಿಡ್, ಸ್ತ್ರೀ ರೋಗ ಸಮಸ್ಯೆಗಳು, ನಿರಂತರ ಕಾಡುವ ಸೋಂಕುಗಳು ಸೇರಿದಂತೆ ಮಾನಸಿಕ ಕಾಯಿಲೆಗಳನ್ನು ನಿಯಂತ್ರಿಸುವ ಶಕ್ತಿ ಯೋಗ ಮತ್ತು ಪ್ರಾಣಾಯಾಮಕ್ಕಿದೆ. ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಪೂರ್ಣ ಜೀವನ ನಡೆಸಬಹುದು. ಈ ಹಿನ್ನೆಲೆಯಲ್ಲಿ ಎಲ್ಲರೂ ಯೋಗವನ್ನು ಕಲಿತರೆ ಆರೋಗ್ಯವಂತರಾಗಬಹುದಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಈ ಶಿಬಿರ ಕುರಿತಂತೆ ಹೆಚ್ಚಿನ ವಿವರಗಳಿಗೆ 9008850627, 9845174628 ಸಂಪರ್ಕಿಸುವಂತೆ ಅವರು ಕೋರಿದರು. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮುಖಂಡರಾದ ಗುರುಸಿದ್ದಯ್ಯ, ನಾಗೇಂದ್ರ ಇದ್ದರು.