ಮಂಡ್ಯದಿಂದ ಪುತ್ರ ನಿಖಿಲ್ ಸ್ಪರ್ಧೆ ಖಚಿತಪಡಿಸಿದ ಸಿಎಂ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವುದನ್ನು ಸಿಎಂ ಕುಮಾರಸ್ವಾಮಿ ಇಂದಿಲ್ಲಿ ಪರೋಕ್ಷವಾಗಿ ತಿಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಜೆಡಿಎಸ್ ಅಭ್ಯರ್ಥಿಯೇ ಇಲ್ಲಿ ಕಣಕ್ಕಿಳಿಯುತ್ತಾರೆ ಎಂದಿದ್ದಾರೆ.

ಸಂಪಾದಕರೊಟ್ಟಿಗೆ ಅನೌಪಚಾರಿಕ ವಾಗಿ ಮಾತನಾಡುವ ಸಂದರ್ಭದಲ್ಲಿ ಅವರಿಗೆ ಕೇಳಿ ಬಂದ ಪ್ರಶ್ನೆಗೆ ತಮ್ಮ ಪುತ್ರನ ಬಗ್ಗೆ ವ್ಯಾಖ್ಯಾನ ಮಾಡುವ ಮೂಲಕ ಆತನೇ ಅಭ್ಯರ್ಥಿ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ.

ನಿಖಿಲ್ ಮಂಡ್ಯ ಲೋಕಸಭಾ ಕ್ಷೇತ್ರ ದಿಂದ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಡಾಕ್ಟರ್ ಮಗ ಡಾಕ್ಟರ್, ತಾರೆಯರ ಮಕ್ಕಳು ಚಿತ್ರನಟರಾಗುತ್ತಾರೆ. ಲಾಯರ್ ಮಗ ಲಾಯರ್ ಆಗ್ತಾರೆ, ರಾಜ ಕಾರಣಿ ಮಗ ರಾಜಕಾರಣಿ ಆಗು ತ್ತಾನೆ. ಹಲವಾರು ಪಕ್ಷಗಳಲ್ಲಿ ತಂದೆ, ಮಗ, ಮೊಮ್ಮಗ ಇದ್ದಾರೆ. ನಮ್ಮ ಕುಟುಂಬವೂ ಸಾರ್ವಜನಿಕ ಜೀವನ ದಲ್ಲಿ ತೊಡಗಿಸಿಕೊಂಡಿದೆ. ಸದ್ಯಕ್ಕೆ ಸಿನಿಮಾ ರಂಗದ ಜೊತೆಗೆ ರಾಜಕೀಯ ದಲ್ಲೂ ಇದ್ದಾನೆ.

ಸಾರ್ವಜನಿಕ ಜೀವನದಲ್ಲಿ ಅವನು ಪಾದಾರ್ಪಣೆ ಮಾಡುತ್ತಾನೆ ಎಂದರೆ ನಮ್ಮ ಕುಟುಂಬ ಅಡ್ಡಿಪಡಿಸುವುದಿಲ್ಲ. ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಮಂಡ್ಯಕ್ಕೆ ನೀಡಿರುವ ಕೊಡುಗೆ ಏನು? ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು. ಅಂಬರೀಶ್ ಲೋಕಸಭೆ ಮತ್ತು ವಿಧಾನಸಭೆ ಸದಸ್ಯರಾ ಗಿದ್ದರು. ಇಂತಹ ಸಂದರ್ಭದಲ್ಲಿ ಅವರು ಮಂಡ್ಯ ಜಿಲ್ಲೆಗೆ ನೀಡಿರುವ ಕೊಡುಗೆ ಯಾದರೂ ಏನು. ಲೋಕಸಭಾ ಚುನಾವಣೆಗೆ ಕಣಕ್ಕಿಳಿಯುವುದಾಗಿ ಹೇಳಿಕೊಂಡಿ ದ್ದಾರೆ. ಅದಕ್ಕೆ ನಮ್ಮ ಅಡ್ಡಿ ಇಲ್ಲ. ಸದ್ಯಕ್ಕೆ ಅವರಿಗೆ ಅನುಕಂಪದ ಅಲೆ ಇದೆ. ಅದು ಎಲ್ಲ ಕಾಲಕ್ಕೂ ಇರುವುದಿಲ್ಲ ಎಂದರು. ಅನುಕಂಪ ಎಂದಾಕ್ಷಣ ಕೆಲವು ಸಂಪಾದಕರು ನೀವೇ ಕೆಲವೊಮ್ಮೆ ಎಮೋಶನ್ ಆಗಿ ಅಳುತ್ತಿರಲ್ಲ. ಇದೊಂದು ದೌರ್ಬಲ್ಯವಲ್ಲವೆ? ಎಂಬ ಪ್ರಶ್ನೆಗೆ ಕುಮಾರಸ್ವಾಮಿ ನಾನು ಕೆಲವೊಮ್ಮೆ ಭಾವುಕ ಜೀವಿ, ಎಮೋಶನಲ್ ಆಗಿ ಮಾತಾಡ್ತೀನಿ. ಅದು ನನಗೆ ಸಾರ್ವಜನಿಕ ವಲಯದಲ್ಲಿ ಅನುಕಂಪ ತಂದುಕೊಡುತ್ತದೆ. ಇದು ನನ್ನ ದೌರ್ಬಲ್ಯವೂ ಹೌದು ಎಂದರು