ಜಿಲ್ಲಾದ್ಯಂತ ಸಡಗರ, ಭಕ್ತಿಭಾವದ ರಂಜಾನ್ ಆಚರಣೆ ಪರಿಸರ ಪ್ರೇಮಿಯ ಹಸಿರು ರಂಜಾನ್ ಆಚರಣೆ…!

ಮಂಡ್ಯ:  ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಜಿಲ್ಲೆಯ ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ, ನಾಗಮಂಗಲ, ಪಾಂಡವಪುರ, ಕೆ.ಆರ್.ಪೇಟೆ ತಾಲೂಕುಗಳಲ್ಲಿ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಆಚರಿಸಿದರು.

ಮಂಡ್ಯ: ಮಂಡ್ಯ ನಗರದ ಸಂತೇಮಾಳದ ಬಳಿಯ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಪುಟ್ಟ ಪುಟ್ಟ ಮಕ್ಕಳು ಸಹ ಪ್ರಾರ್ಥನೆಯಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಸಾಮೂಹಿಕ ಪ್ರಾರ್ಥನೆ ಬಳಿಕ ಯುವಕರು, ಹಿರಿಯರು, ಕಿರಿಯರು ಮತ್ತು ಮಕ್ಕಳು ಪರಸ್ವರ ಶುಭಾಶಯ ಕೋರುವ ಮೂಲಕ ರಂಜಾನ್ ಹಬ್ಬವನ್ನು ಆಚರಿಸಿದರು.

ನಗರದ ಎಲ್ಲ ಮುಸ್ಲಿಮರು ಈದ್ಗಾ ಮೈದಾನದಲ್ಲಿ ಜಮಾವಣೆಗೊಂಡು ಸಾಮೂಹಿಕವಾಗಿ ಖುರಾನ್ ಪಠಣ ಮಾಡುತ್ತ `ಅಲ್ಹಾ’ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಮುಸ್ಲಿಂ ಧರ್ಮ ಗುರುಗಳು ಧಾರ್ಮಿಕ ಸಂದೇಶ ನೀಡಿದರು.

ಶ್ರೀರಂಗಪಟ್ಟಣ: ತಾಲೂಕಿನ ಕರಿಘಟ್ಟದಲ್ಲಿಂದು ಪರಿಸರ ಪ್ರೇಮಿಯೊಬ್ಬ ಸಸಿ ನೆಟ್ಟು ಹಸಿರು ರಂಜಾನ್ ಆಚರಣೆ ಮಾಡಿದರು.
ಮೈಸೂರಿನ ಶುದ್ಧ ಕುಡಿಯುವ ನೀರು ಪೂರೈಕೆದಾರನೂ ಆಗಿರುವ ಮೈಸೂರಿನ ಇಮ್ರಾನ್ ಮತ್ತು ಕುಟುಂಬದಿಂದ ಹಸಿರು ರಂಜಾನ್ ಆಚರಣೆಗೆ ಜನಮೆಚ್ಚುಗೆ ವ್ಯಕ್ತವಾಗಿದೆ. ಪರಿಸರ ಪ್ರೇಮಿ ರಮೇಶ್ ನೇತೃತ್ವದಲ್ಲಿ ಗಿಡ ನೆಟ್ಟ ಇಮ್ರಾನ್ ಕುಟುಂಬ, ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು. ಅವರ ಈ ಕಾರ್ಯಕ್ಕೆ ಸ್ನೇಹಿತರು ಕೂಡ ಸಾಥ್ ನೀಡಿದರು.