ಮನೆಗೋಡೆ ಕುಸಿದು ಮಹಿಳೆ ಸಾವು

ಮಂಡ್ಯ:  ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಗೋಡೆ ಕುಸಿದು ಮಹಿಳೆ ಮೃತಪಟ್ಟು, ಆಕೆಯ ಪತಿ ತೀವ್ರ ಗಾಯಗೊಂಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಬೋರೆ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮಮ್ಮ (55) ಮೃತ ಮಹಿಳೆ. ಈಕೆಯ ಪತಿ ಅಂಗವಿಕಲ ಸೋಮಾಚಾರಿ ತೀವ್ರ ಗಾಯಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚೆಗೆ ತಾಲೂಕಿನಲ್ಲಿ ಸುರಿಯು ತ್ತಿರುವ ಮಳೆಯಿಂದ ಮನೆಯ ಗೋಡೆಗಳು ಶೀತ ಹಿಡಿದು ಹಸಿಯಾಗಿದ್ದವು. ಸೋಮವಾರ ರಾತ್ರಿ 10.45ರಲ್ಲಿ ಒಂದು ಬದಿಯ ಗೋಡೆ ಜಂತಿ ಸಮೇತ ಕುಸಿದು ಮಲಗಿದ್ದ ಲಕ್ಷ್ಮಮ್ಮ ದಂಪತಿ ಮೇಲೆ ಬಿದ್ದಿದೆ. ಪರಿಣಾಮ ದಂಪತಿಗಳು ತೀವ್ರ ಗಾಯಗೊಂಡಿದ್ದಾರೆ.

ತಕ್ಷಣ ಅಕ್ಕಪಕ್ಕದ ನಿವಾಸಿಗಳು ಗಾಯಾಳುಗಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದರಾದರೂ, ಲಕ್ಷ್ಮಮ್ಮ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಕ್ಷೇತ್ರದ ಶಾಸಕ ಎ.ಎಸ್. ರವೀಂದ್ರ ಶ್ರೀಕಂಠಯ್ಯ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಸ್ಥಳಕ್ಕೆ ಪೋಲಿಸ್ ಹಿರಿಯ ಅಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.