ಮೈಸೂರು, ಡಿ.8(ಆರ್ಕೆಬಿ)- ಕೊರೊನಾ ಕಾರಣದಿಂದಾಗಿ ಆರೋಗ್ಯ ಸಮಸ್ಯೆಗೆ ಒಳಗಾಗುವ ಬದಲು ಮುಂಜಾಗರೂಕತೆ ವಹಿಸುವುದು ಸೂಕ್ತ ಎಂಬ ಜಾಗೃತಿ ಎಲ್ಲರಲ್ಲೂ ಬೆಳೆಯುತ್ತಿದೆ. ಹೀಗಾಗಿ ಈ ಅರಿವು ಗಟ್ಟಿಗೊಳಿಸುವ ನಿಟ್ಟಿನಲ್ಲಿ ತಾವು ವಿಶಿಷ್ಟ ರೀತಿಯ ಕ್ಯಾಲೆಂಡರ್ ಸಿದ್ಧಪಡಿಸಿರುವುದಾಗಿ ಜ್ಞಾನೋದಯ ಆರೋಗ್ಯ ಶಿಕ್ಷಣ ಪ್ರತಿಷ್ಠಾನದ ಡಾ. ವೆಂಕಟಸುಬ್ಬರಾವ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವು ವೃತ್ತಿಯಲ್ಲಿ ವೈದ್ಯರಾಗಿದ್ದು, ಹಣ ಮಾಡುವ ಆಸೆ ತಮಗಿಲ್ಲ. ಬದಲಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಈ ಕ್ಯಾಲೆಂಡರ್ ಸಿದ್ಧಪಡಿಸಿರುವುದಾಗಿ ವಿವರಿಸಿದರು.
ಉದಾಹರಣೆಗೆ 2020 ಎಂಬುದರ ಸ್ಥಾನದಲ್ಲಿ ಸುಮ್ಮನೆ ಕೈಉಜ್ಜಿಕೊಂಡು ಸುಮ್ಮನಾಗದೇ 20 ಸೆಕೆಂಡ್ಗಿಂತ ಹೆಚ್ಚು ಕಾಲ ಕೈತೊಳೆಯಿರಿ ಎಂದೋ ಇತರೆ ಕಡೆ ಕುಟುಂಬದ ಆರೋಗ್ಯ ಹಿನ್ನೆಲೆ ತಪಾಸಣೆಗೆ ಕಡ್ಡಾಯವಾಗಿ ಪಾಲ್ಗೊಳ್ಳಿ ಎಂದು, ಮಕ್ಕಳನ್ನು ಹೇಗೆ ಬೆಳೆಸಬೇಕು, ಅವರಲ್ಲಿ ಆರೋಗ್ಯಕರ ಅಭ್ಯಾಸಗಳೇನು ಇರಬೇಕು ಎಂಬ ಮಾಹಿತಿ ನೀಡಲಾಗಿದೆ ಎಂದು ವಿವರಿಸಿದರು. ಟ್ರಸ್ಟ್ನ ಚಂದ್ರಶೇಖರ್, ರಾಜೇಂದ್ರ sಸುದ್ದಿಗೋಷ್ಠಿಯಲ್ಲಿ ಇದ್ದರು.