ಮೈಸೂರು, ಮೇ 30(ಪಿಎಂ)- ನಂಜನ ಗೂಡು ಕೈಗಾರಿಕಾ ಪ್ರದೇಶದ ಜುಬಿಲಂಟ್ ಕಾರ್ಖಾನೆಯಿಂದ ಜಿಲ್ಲಾಡಳಿತದ ಮೂಲಕ ಮೈಸೂರು ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಹಾಗೂ ಒಳಚರಂಡಿ ಕಾರ್ಮಿಕರಿಗೆ ದಿನಸಿ ಕಿಟ್ಗಳನ್ನು ಶನಿ ವಾರ ವಿತರಣೆ ಮಾಡಲಾಯಿತು.
ಮೈಸೂರಿನ ಪುರಭವನದ ಆವರಣ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಕಿಟ್ ವಿತರಿಸಿದರು.
ಪೌರಕಾರ್ಮಿಕರು (ಖಾಯಂ, ಗುತ್ತಿಗೆ), ಒಳಚರಂಡಿ ಕಾರ್ಮಿಕರು ಹಾಗೂ ಪಾಲಿಕೆಯ ತ್ಯಾಜ್ಯ ಸಂಗ್ರಹ ಆಟೋಗಳ ಚಾಲಕರು ಸೇರಿದಂತೆ 2,500 ಮಂದಿಗೆ ದಿನಸಿ ಕಿಟ್ ನೀಡಲಾಗುತ್ತಿದ್ದು, ಕಾರ್ಯ ಕ್ರಮದಲ್ಲಿ 100 ಮಂದಿಗೆ ಕಿಟ್ ವಿತರಣೆ ಮಾಡಲಾಯಿತು. ಅಕ್ಕಿ 5 ಕೆಜಿ, ರಾಗಿಹಿಟ್ಟು 1 ಕೆಜಿ, ಹರಳು ಉಪ್ಪು 1 ಕೆಜಿ, ಬೇಳೆ, ಹೆಸರುಕಾಳು, ರವೆ, ಸಕ್ಕರೆ ತಲಾ ಅರ್ಧ ಕೆಜಿ, ಸಾಸಿವೆ 100 ಗ್ರಾಂ ಹಾಗೂ ಅರ್ಧ ಲೀ. ಅಡುಗೆ ಎಣ್ಣೆ ಒಳಗೊಂಡ ದಿನಸಿ ಕಿಟ್ಗಳನ್ನು ವಿತರಿಸಲಾಯಿತು.
ಶಾಸಕ ಎಸ್.ಎ.ರಾಮದಾಸ್ ಮಾತ ನಾಡಿ, ಲಾಕ್ಡೌನ್ ಅವಧಿಯಲ್ಲಿಯೂ ಕೊರೊನಾ ಸೋಂಕು ಹರಡದಂತೆ ಮೈಸೂರು ನಗರದ ಸ್ವಚ್ಛತೆ ಕಾಪಾಡುವ ಮಹತ್ತರ ಕೆಲಸವನ್ನು ಪೌರಕಾರ್ಮಿಕರು ಮಾಡಿ ದ್ದಾರೆ. ಜಿಲ್ಲೆಯಲ್ಲಿ ಯಶಸ್ವಿಯಾಗಿ ಕೊರೊನಾ ಸೋಂಕು ನಿಭಾಯಿಸಲಾಗಿದೆ. ದಕ್ಷಿಣ ಭಾರತ ದಲ್ಲೇ ಮೈಸೂರು ಗುರು ತಿಸಿಕೊಳ್ಳು ವಂತಾಗಿದೆ. ಜನಪ್ರತಿನಿಧಿಗಳಿಂದ ಹಿಡಿದು ಕಟ್ಟಕಡೆಯ ಸಿಬ್ಬಂದಿವರೆಗೂ ಸಮನ್ವಯ ದಿಂದ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಈ ಸಾಧನೆ ಸಾಧ್ಯವಾಯಿತು ಎಂದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ಕೊರೊನಾದಂತಹ ಅಪಾಯಕಾರಿ ಸೋಂಕನ್ನು ಯಶಸ್ವಿಯಾಗಿ ನಿಯಂತ್ರಿಸಿ ಮೈಸೂರು ಇಡೀ ರಾಜ್ಯದಲ್ಲಿ ಪ್ರಶಂಸೆಗೆ ಪಾತ್ರವಾ ಗಿದೆ. ಇದರಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದಾಗಿದೆ. ಅವರು ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾತನಾಡಿ, ತ್ಯಾಜ್ಯ ವಸ್ತುಗಳಿಂದಲೂ ವೈರಾಣು ಹರಡುತ್ತದೆ. ಅಂತಹವುದರಲ್ಲಿ ಸೂಕ್ತ ಮುನ್ನೆಚ್ಚರಿಕೆಯಿಂದ ಪೌರಕಾರ್ಮಿ ಕರು ಕಾರ್ಯನಿರ್ವಹಿಸಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ಇಲಾಖೆ ಹಾಗೂ ಸಂಘ-ಸಂಸ್ಥೆ ಗಳು ಸಮನ್ವಯತೆಯಿಂದ ಕಾರ್ಯನಿರ್ವ ಹಿಸಿದ್ದರಿಂದ ಸೋಂಕು ನಿಯಂತ್ರಣ ಸಾಧ್ಯ ವಾಯಿತು. ಮುಂದೆಯೂ ಇದೇ ರೀತಿ ನಿರ್ವಹಿಸಬೇಕಿದೆ. ಪೌರಕಾರ್ಮಿಕರು ತಮ್ಮ ಹಾಗೂ ಕುಟುಂಬದ ಆರೋಗ್ಯ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಉಪ ಮೇಯರ್ ಶ್ರೀಧರ್, ಪುರಭವನ ಸಮಿತಿ ಅಧ್ಯಕ್ಷ ಶಿವಕುಮಾರ್, ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗ ರಾಜ್ ಸೇರಿದಂತೆ ಮತ್ತಿತರರಿದ್ದರು.