ಹುಣಸೂರು, ಏ.12(ಕೆಕೆ)-ತಾಲೂ ಕಿನ ವಿವಿಧೆಡೆ ಗುರುವಾರ ಮಧ್ಯರಾತ್ರಿ ಸುರಿದ ಬಿರುಗಾಳಿ ಸಹಿತ ಭಾರೀ ಮಳೆಗೆ ಹಲವೆಡೆ ಸಾಕಷ್ಟು ಹಾನಿ ಸಂಭವಿಸಿದೆ.
ತಾಲೂಕಿನಲ್ಲಿ ಒಟ್ಟಾರೆ ಸರಾಸರಿ 18 ಮಿ.ಮೀ. ಮಳೆಯಾಗಿದ್ದು, ನಗರದಲ್ಲಿ 21 ಮಿ.ಮೀ., ಚಿಲ್ಕುಂದ-10.2, ಬಿಳಿಕೆರೆ- 20.6 ಮಿ.ಮೀ. ಹಾಗೂ ಹನಗೋಡು ಭಾಗಗಳಲ್ಲಿ ಮಳೆ ಸರಾಸರಿ ದಾಖಲಾಗಿದೆ.
ಬಿರುಗಾಳಿ ಮಳೆಯಿಂದಾಗಿ ಬಿಳಿಕೆರೆ ಹೋಬಳಿಯ ದೈತ್ಯನಕೆರೆ ಕಾವಲ್, ಅಸ್ವಾಳು, ತರಿಕಲ್ಕಾವಲ್ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಸುಮಾರು 50 ಎಕರೆಯಷ್ಟು ಬಾಳೆ ಬೆಳೆ ನಾಶವಾಗಿದೆ. ಹನಗೋಡು ಹೋಬಳಿಯ ದಾಸನಪುರ ಗ್ರಾಮದಲ್ಲಿ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ಮನೆಗಳಿಗೆ ನೀರು ನುಗ್ಗಿದೆ. ನಗರದ ಠಾಣೆಯ ತಾರಸಿ ಮೇಲೆ ಮರದ ರೆಂಬೆ ಮುರಿದು ಬಿದ್ದಿತ್ತು. ಅರಣ್ಯ ಇಲಾಖೆಯ ಹಳೆಯ ವಸತಿಗೃಹ ಕುಸಿದು ಬಿದ್ದು ಸಾಕಷ್ಟು ನಷ್ಟ ಸಂಭವಿಸಿದೆ.
ಶಾಸಕರ ಭೇಟಿ: ಶಾಸಕ ಹೆಚ್.ಪಿ. ಮಂಜುನಾಥ್ ಹನಗೋಡು ಬಳಿಯ ದಾಸನಪುರದಲ್ಲಿ ಮನೆಗಳಿಗೆ ನೀರು ನುಗ್ಗಿದ ಪ್ರದೇಶಕ್ಕೆ ಭೇಟಿ ನೀಡಿ ತಕ್ಷಣವೇ ಚರಂಡಿ ಹೂಳು ತೆಗೆಸುವಂತೆ ಹಾಗೂ ಅಗತ್ಯವಿರುವೆಡೆ ಚರಂಡಿ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಇಂಜಿ ನಿಯರ್ಗೆ ಸೂಚಿಸಿದರು. ಇಲ್ಲಿನ ರಸ್ತೆ ಬದಿಯ ತಿಪ್ಪೆಗಳನ್ನು ತೆರವುಗೊಳಿಸುವಂತೆ ಪಿಡಿಓಗೆ ಸೂಚಿಸಿದರು. ಜಿಪಂ ಸದಸ್ಯ ಕಟ್ಟನಾಯಕ, ತಹಸೀಲ್ದಾರ್ ಬಸವ ರಾಜ್, ಇಓ ಗಿರೀಶ್, ಕಿರಂಗೂರು ಗ್ರಾಪಂ ಅಧ್ಯಕ್ಷ ಚೆಲುವರಾಜು ಹಾಜರಿದ್ದರು.