ಮೈಸೂರು, ಮೇ 6- ಕೋವಿಡ್-19 ನಿಂದ ಲಾಕ್ಡೌನ್ ಆಗಿರುವ ಹಿನ್ನೆಲೆ ಇನ್ಫೋಸಿಸ್ ಫೌಂಡೇಶ್ನ್ ವತಿಯಿಂದ ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ, ವಲಸೆ ಕಾರ್ಮಿಕರು ಮತ್ತು ಅಸಂಘ ಟಿತ ವಲಯ ಕಾರ್ಮಿಕರೊಳಗೊಂಡ ಒಟ್ಟು 1 ಸಾವಿರ ಕುಟುಂಬಗಳಿಗೆ ಅಕ್ಕಿ, ಎಣ್ಣೆ, ಹಿಟ್ಟುಗಳು ಸೇರಿದಂತೆ ಅಗತ್ಯ ಆಹಾರ ಪದಾರ್ಥಗಳನ್ನು ಹೊಂದಿ ರುವ 1000 ಕಿಟ್ಗಳನ್ನು ವಿತರಿಸಲಾಯಿತು.
ಮೈಸೂರು ಜಿಲ್ಲಾಡಳಿತದ ಪರವಾಗಿ ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ನಿರ್ಗತಿಕರಿಗೆ ನೆರವಾಗುವಂತೆ ಕೋವಿಡ್-19 ಸಹಾಯ ಟಾಸ್ಕ್ ಫೋರ್ಸ್ನ ಸದಸ್ಯರಾಗಿರುವ ಇನ್ಫೋಸಿಸ್ನ ಫಾಥಾಹೀನ್ ಮಿಸ್ಬಾ ಮೂಲಕ ವಿನಂತಿಸಲಾಗಿದ್ದು, ಇದಕ್ಕೆ ತಕ್ಷಣವೇ ಸ್ಪಂದಿಸಿದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು 24 ಗಂಟೆಯಲ್ಲೇ ನಿರ್ಗತಿಕರಿಗೆ ಅಗತ್ಯ ಆಹಾರ ಸಾಮಗ್ರಿಗಳುಳ್ಳ ಕಿಟ್ಗಳನ್ನು ಒದಗಿಸಿ ನೆರವಾಗಿದ್ದಾರೆ. ಇದು ವಿಶ್ವಾಸಾರ್ಹ ಸಂಸ್ಥೆಯಾಗಿದೆ ಎಂದು ಹೇಳಿದ ಪಾಲಿಕೆ ಆಯುಕ್ತ ಗುರುದತ್ ಅವರು, ಬಿಕ್ಕಟ್ಟಿನ ಸಂದರ್ಭದಲ್ಲಿ ಬೆಂಬಲ ನೀಡಿದಕ್ಕೆ ಇನ್ಫೋಸಿಸ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು. ಈ ವೇಳೆ ಪಾಲಿಕೆಯ ಬಿಳಿಗಿರಿರಂಗ, ಪಟ್ಟಣ ಯೋಜನಾ ಜಂಟಿ ನಿರ್ದೇಶಕ ಜಯಸಿಂಹ, ಇನ್ಫೋಸಿಸ್ ಸಂಸ್ಥೆಯ ಫಾಥಾಹೀನ್ ಮಿಸ್ಬಾ, ಶಾಜಿ ಮ್ಯಾಥು, ರಾಘವೇಂದ್ರ ಉಡುಪ, ಜೆ.ಎಸ್.ಎಸ್ ಫೌಂಡೇಶನ್ನ ಯೋಗಾತ್ಮ ಶ್ರೀಹರಿ ಸೇರಿ ಇತರರು ಉಪಸ್ಥಿತರಿದ್ದರು.