ಜೀವನ ಸಹಜಸ್ಥಿತಿಗೆ ಬಂದಿದೆ ಆದರೆ ಕೊರೊನಾ ತೊಲಗಿಲ್ಲ… ಎಚ್ಚರ
ಮೈಸೂರು

ಜೀವನ ಸಹಜಸ್ಥಿತಿಗೆ ಬಂದಿದೆ ಆದರೆ ಕೊರೊನಾ ತೊಲಗಿಲ್ಲ… ಎಚ್ಚರ

November 4, 2020

ಮೈಸೂರು, ನ.3(ಎಸ್‍ಬಿಡಿ)- ಕೊರೊನಾ ಹೊಡೆತಕ್ಕೆ ಜಗತ್ತೇ ತತ್ತರಿಸಿದೆ. ಸೋಂಕು ಕೊಂಚ ತಗ್ಗಿದರೂ ಸುಧಾರಿಸಿಕೊಳ್ಳಲು ಇನ್ನೂ ಬಹಳಷ್ಟು ಸಮಯ ಬೇಕು. ಪ್ರಕರಣ ಕಡಿಮೆಯಾಗಿವೆ ಎಂದು ಸ್ವಲ್ಪ ಎಚ್ಚರ ತಪ್ಪಿದರೂ 2ನೇ ಬಾರಿ ಕೊರೊನಾಘಾತ ನಿಶ್ಚಿತ. ಹಾಗಾಗಬಾರದೆಂದರೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ.

ಈ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವುದರ ಜೊತೆಗೆ ದಂಡ ವಿಧಿಸುವ ಮೂಲಕ ತೀಕ್ಷ್ಣವಾಗಿಯೂ ಮನವರಿಕೆ ಮಾಡಿ ಕೊಡಲಾಗುತ್ತಿದೆ. ಆದರೆ ಜನರಿಗೆ ಬುದ್ಧಿ ಹೇಳುವ ಜನಪ್ರತಿನಿಧಿ ಗಳು, ಅಧಿಕಾರಿಗಳು, ಮುಖಂಡರು ಈ ಎಲ್ಲಾ ನಿಯಮಗಳು ತಮಗೆ ಅನ್ವಯಿಸುವುದಿಲ್ಲ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಸಭೆ-ಸಮಾರಂಭ, ಪ್ರತಿಭಟನೆ ಇನ್ನಿತರ ಕಾರ್ಯಕ್ರಮಗಳಲ್ಲಿ ವ್ಯಕ್ತಿಗತ ಅಂತರವೇ ಇರುವುದಿಲ್ಲ, ಇನ್ನು ಫೋಟೋ, ವಿಡಿಯೋದಲ್ಲಿ ತಮ್ಮ ಮುಖ ಕಾಣಿಸುವುದಿಲ್ಲ ಎಂದು ಮಾಸ್ಕ್ ಧರಿಸುವುದೇ ಇಲ್ಲ, ಧರಿಸಿದ್ದರೂ ಅದನ್ನು ಕತ್ತಿನ ಬಳಿಗೆ ಸರಿಸಿಬಿಡುತ್ತಾರೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು, ಓರ್ವ ಜವಾಬ್ದಾರಿಯುತ ನಾಗರಿಕ ರಾಗಿ ಬೇಸರ ವ್ಯಕ್ತಪಡಿಸಿರುವುದಲ್ಲದೆ, ಕಟ್ಟುನಿಟ್ಟಿನ ನಿಯಮ ಪಾಲನೆಗೆ ಮಾಧ್ಯಮಗಳ ಸಹಕಾರ ಕೋರಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಸೋಂಕು ತಡೆಯುವ ನಿಟ್ಟಿನಲ್ಲಿ ಕಳೆದ 9 ತಿಂಗಳಿಂದ ಸತತ ಪ್ರಯತ್ನ ನಡೆಯುತ್ತಲೇ ಇದೆ. ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಈ ಮಾರಕ ಸೋಂಕಿನಿಂದ ಸಾರ್ವಜನಿ ಕರ ರಕ್ಷಿಸುವ ಸಲುವಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಪೊಲೀಸ್ ಇಲಾಖೆ ಕೂಡ ಹಗಲಿರುಳು ಶ್ರಮಿಸುತ್ತಿದೆ. ಸೋಂಕು ಹತೋಟಿಗೆ ತರುವ ಪ್ರಯತ್ನವಾಗಿ ಸರ್ಕಾರ ಲಾಕ್‍ಡೌನ್ ಜಾರಿಗೊಳಿ ಸಿದ ಸಂದರ್ಭದಲ್ಲಂತೂ ಪೊಲೀಸ್ ಇಲಾಖೆ ಸಮಯ ಪರಿಗಣನೆ ಇಲ್ಲದೆ ಜನರ ಅಮೂಲ್ಯ ಪ್ರಾಣ ರಕ್ಷಣೆಗೋಸ್ಕರ ಅವಿರತ ಸೇವೆ ಒದಗಿಸಿದ್ದು, ಅದು ನಿಮ್ಮ ಅವಗಾಹನೆಗೂ ಬಂದಿದೆ. ಕ್ರಮೇಣ ಸರ್ಕಾರ ಹಂತ ಹಂತವಾಗಿ ಲಾಕ್‍ಡೌನ್ ಸಡಿಲಗೊಳಿಸಿದಾಗ, ಜನಜೀವನ ಸಹಜ ಸ್ಥಿತಿಗೆ ಮರಳುವ ವಿಶ್ವಾಸದ ನಡುವೆಯೇ ಕೋವಿಡ್-19 ನಿಯಂತ್ರಣ ಪ್ರಯತ್ನದಲ್ಲಿ ಎಲ್ಲೋ ಒಂದು ಕಡೆ ಹಿನ್ನಡೆಯಾಗುತ್ತಿರುವುದು ನಮ್ಮ ಗಮನಕ್ಕೆ ಬರುತ್ತಿದೆ.

ಅದರಲ್ಲೂ, ಸಭೆ-ಸಮಾರಂಭ, ಧಾರ್ಮಿಕ-ಸಾಮಾಜಿಕ ಕಾರ್ಯ ಕ್ರಮಗಳು, ಪ್ರತಿಭಟನೆ-ಧರಣಿ ಇಂತಹ ಸಂದರ್ಭದಲ್ಲಿ ಜನರು ತಮಗರಿವಿಲ್ಲದಂತೆ ಕೋವಿಡ್-19 ಮಾರ್ಗಸೂಚಿಗಳನ್ನು ಧಿಕ್ಕರಿ ಸುತ್ತಿರುವುದು ಕಂಡು ಬಂದಿದೆ. ಸಾಮಾಜಿಕ ಅಂತರ ಕಾಯ್ದು ಕೊಳ್ಳದೇ ಇರುವುದು, ಮಾಸ್ಕ್‍ಗಳನ್ನು ಧರಿಸದಿರುವುದು, ಒಂದು ವೇಳೆ ಧರಿಸಿಯೂ ಆಗಾಗ ಅದನ್ನು ಸರಿಸಿ ಮಾತನಾಡುವುದು, ಪರಸ್ಪರ ಸ್ಪರ್ಶಿಸುವುದು ಹೀಗೆ ಸೋಂಕು ಹರಡಲು ಆಸ್ಪದ ಮಾಡಿ ಕೊಡುವ ಸ್ವೇಚ್ಛಾಚಾರದ ವರ್ತನೆಗಳು
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆ. ಪೊಲೀಸ್ ಇಲಾಖೆ ಗಮನಿಸಿರುವಂತೆ ಇಂತಹ ಕಾರ್ಯಕ್ರಮಗಳಲ್ಲಿ ಜನಮಾತ್ರವಲ್ಲ ಜನಪ್ರತಿನಿಧಿಗಳು, ರಾಜಕೀಯ ಮುಖಂಡ ರಲ್ಲದೆ ಅಧಿಕಾರಿಗಳೂ ಕೂಡ ತಮ್ಮ ಉಪಸ್ಥಿತಿಯನ್ನು ಸ್ಥಿರೀಕರಿಸುವ ಸಲುವಾಗಿ ಫೋಟೋ ಹಾಗೂ ವಿಡಿಯೋಗಳಿಗೆ ಮುಗಿಬೀಳುತ್ತಿದ್ದಾರೆ. ಸಹಜ ಎಂಬಂತೆ ಫೋಟೋಗ್ರಾಫರ್ ಹಾಗೂ ವೀಡಿಯೋಗ್ರಾಫರ್‍ಗಳು ಏಕಕಾಲದಲ್ಲಿ ಎಲ್ಲರನ್ನೂ ಕ್ಯಾಮರಾದಲ್ಲಿ ಒಟ್ಟಿಗೆ ಸೆರೆ ಹಿಡಿಯಬೇಕೆಂಬ ಉದ್ದೇಶದಿಂದ ಹತ್ತಿರತ್ತಿರ ಸರಿದು ಗುಂಪುಗೂಡುವಂತೆ ಸಲಹೆ ನೀಡುವುದಿದೆ. ಇಂತಹ ಫೋಟೋಗಳು, ವೀಡಿಯೋಗಳು ಪ್ರತಿನಿತ್ಯ ಸುದ್ದಿ ಮಾಧ್ಯಮಗಳಲ್ಲಿ
ಪ್ರಸಾರವಾಗುತ್ತಿದ್ದು, ಇಂತಹ ಚಿತ್ರಣಗಳನ್ನು ನೋಡಿದ ಜನ ಇವು ಕಾನೂನು ಬದ್ಧವೆಂದೇ ಪರಿಭಾವಿಸಿ, ಅವರೂ ಪ್ರೇರೇಪಿತರಾಗುವ ಸಾಧ್ಯತೆಗಳೂ ಹೆಚ್ಚಾಗಿವೆ. ಇದು ಎಂತಹ ಅಪಾಯಕಾರಿ ಎಂಬುದರ ಅರಿವು ಯಾರೊಬ್ಬರ ಗಮನಕ್ಕೂ ಬಾರದೆ ಹೋಗುತ್ತಿದೆ.

ಹಾಗಾಗಿ ಕೋವಿಡ್-19 ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಾಗಿ ಮಾರ್ಗಸೂಚಿ ಗಳನ್ನು ಪಾಲಿಸುವಂತೆ ಮಾಧ್ಯಮಗಳು ಜನರಿಗೆ ಮನವರಿಕೆ ಮಾಡಿಕೊಡುವುದು, ಅವರನ್ನು ಪ್ರೇರೇಪಿಸುವುದು ಒಂದು ಪರಿಣಾಮಕಾರಿ ಪ್ರಯತ್ನ ಎಂಬುದು ಮನವರಿಕೆಯಾಗಿದೆ. ಮಾಧ್ಯಮ / ಪತ್ರಿಕೆಗಳು ಇದುವರೆಗೂ ಸೋಂಕು ನಿಯಂತ್ರಣಕ್ಕೆ ಬಾರೀ ಪ್ರಮಾಣದಲ್ಲಿ ಸಹಕರಿಸುತ್ತಾ ಬಂದಿವೆ. ಇನ್ನು ಮುಂದೆಯೂ ಈ ಸೋಂಕು ನಿಯಂತ್ರಣ ಹಾಗೂ ಸಾಮಾಜಿಕ ಕಳಕಳಿ ದೃಷ್ಟಿಯಿಂದ ಪೊಲೀಸ್ ಇಲಾಖೆ, ನಿಮ್ಮ ಸಹಕಾರವನ್ನು ಕೋರುತ್ತದೆ ಎಂದು ತಿಳಿಸಿದ್ದಾರೆ.

Translate »