ಮೈಸೂರು, ಮೇ 31(ಆರ್ಕೆಬಿ)- ರಾಜ್ಯ ಸರ್ಕಾರ ಭಾನುವಾರದ ಕಫ್ರ್ಯೂ ಹಿಂತೆಗೆದುಕೊಂಡು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಎಲ್ಲಾ ರೀತಿಯ ಚಟುವಟಿಕೆ ಗಳಿಗೆ ಅನುಮತಿ ನೀಡಿದ್ದರೂ ಮೈಸೂರಿನಲ್ಲಿ ಜನ-ವಾಹನ ಸಂಚಾರ ತೀರಾ ಕಡಿಮೆ ಇತ್ತು.
ಮೈಸೂರು ನಗರ ಬಸ್ ನಿಲ್ದಾಣದಲ್ಲಿ ಪ್ರಯಾಣಿ ಕರ ಸಂಖ್ಯೆಯೂ ಬಹಳ ಕಡಿಮೆ ಇತ್ತು. ಮೈಸೂರಿನ ವಿವಿಧ ರಸ್ತೆಗಳಲ್ಲಿ ಅಂಗಡಿಗಳು ಬಾಗಿಲು ತೆರೆದು ಗ್ರಾಹಕರ ನಿರೀಕ್ಷೆಯಲ್ಲಿದ್ದವು. ಆದರೆ, ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿರುವುದನ್ನು ನೋಡಿ ಕೆಲ ವರ್ತಕರು ಮಧ್ಯಾಹ್ನದ ವೇಳೆಗೆ ಅಂಗಡಿಗಳನ್ನು ಸ್ವತಃ ತಾವೇ ಬಂದ್ ಮಾಡಿ ತೆರಳಿದರು.
ಹೋಟೆಲ್ಗಳಲ್ಲಿ ಪಾರ್ಸೆಲ್ ತೆಗೆದುಕೊಳ್ಳವವರ ಸಂಖ್ಯೆಯೂ ಕಡಿಮೆ ಇತ್ತು. ಆಟೋಗಳು ಸಹ ಖಾಲಿ ನಿಂತಿದ್ದವು. ಈ ಮೊದಲು ಭಾನುವಾರ ಪೂರ್ಣ ಕಫ್ರ್ಯೂ ಘೋಷಿಸಿದ್ದ ಸರ್ಕಾರ, ಈ ಭಾನುವಾರ ಕಫ್ರ್ಯೂ ಹಿಂಪಡೆದಿರುವುದಾಗಿ ಶನಿವಾರ ಸಂಜೆ ಪ್ರಕಟಿಸಿತ್ತು. ಆದರೂ ಜನರು, ವಾಹನಗಳು ಹೆಚ್ಚಾಗಿ ರಸ್ತೆಗಿಳಿದಿರಲಿಲ್ಲ. ಮೈಸೂರಿನ ಗ್ರಾಮಾಂತರ ಮತ್ತು ನಗರ ಬಸ್ ನಿಲ್ದಾಣದಲ್ಲಿ ಬಸ್ಗಳು ಸಿದ್ಧವಾಗಿ ದ್ದರೂ ಪ್ರಯಾಣಿಕರೇ ಇರಲಿಲ್ಲ. ಮೈಸೂರಿನಿಂದ ಚಾಮರಾಜನಗರ, ಮಂಡ್ಯ ಜಿಲ್ಲೆಯ ವಿವಿಧೆಡೆಗೆ ತೆರಳಬೇಕಿದ್ದ ಕೆಲ ಬಸ್ಗಳು ಪ್ರಯಾಣಿಕರಿಲ್ಲದ ಕಾರಣ ನಿಲ್ದಾಣದಲ್ಲೇ ಉಳಿದವು.