ಮುಕ್ತ ವಿವಿ ವತಿಯಿಂದ ಶೀಘ್ರವೇ ಬೃಹತ್ ಆನ್‍ಲೈನ್ ಉದ್ಯೋಗ ಮೇಳ
ಮೈಸೂರು

ಮುಕ್ತ ವಿವಿ ವತಿಯಿಂದ ಶೀಘ್ರವೇ ಬೃಹತ್ ಆನ್‍ಲೈನ್ ಉದ್ಯೋಗ ಮೇಳ

January 19, 2021

ಮೈಸೂರು,ಜ.18(ಪಿಎಂ)-ಪ್ರಸಕ್ತ ಸಾಲಿ ನಲ್ಲಿ ಬೆಳ್ಳಿಹಬ್ಬ ಆಚರಿಸಿಕೊಳ್ಳುವ ಸಂಭ್ರಮ ದಲ್ಲಿರುವ ಮುಕ್ತ ವಿವಿ, ಅತೀ ಶೀಘ್ರವೇ ವಚ್ರ್ಯುಯಲ್ (ಆನ್‍ಲೈನ್) ಉದ್ಯೋಗ ಮೇಳ ಆಯೋಜಿಸಲು ಸಿದ್ಧತೆ ನಡೆಸಿದೆ.

ಮೈಸೂರಿನ ಮುಕ್ತ ಗಂಗೋತ್ರಿಯ ಕುಲ ಪತಿ ಕೊಠಡಿಯ ಸಭಾಂಗಣದಲ್ಲಿ 2020 -21ನೇ (ಆಗಸ್ಟ್ ಬ್ಯಾಚ್) ಸಾಲಿಗೆ ವಿವಿಯ ವಿವಿಧ ಕೋರ್ಸ್‍ಗಳಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಸೋಮವಾರ ಹಮ್ಮಿ ಕೊಂಡಿದ್ದ 3 ದಿನಗಳ ಆನ್‍ಲೈನ್ ಪ್ರವೇಶ ಕಾರ್ಯಕ್ರಮಕ್ಕೆ ಆನ್‍ಲೈನ್ ಮೂಲಕ ಉಪಮುಖ್ಯಮಂತ್ರಿಗಳೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾ ಯಣ ಚಾಲನೆ ನೀಡಿದರು.

ಬಳಿಕ ಮಾತನಾಡಿದ ವಿವಿ ಕುಲಪತಿ ಪ್ರೊ. ಎಸ್.ವಿದ್ಯಾಶಂಕರ್ ವಿವಿಯ ಮುಂದಿನ ಚಟುವಟಿಕೆಗಳು, ವಿವಿಯ ಪ್ರಗತಿ ಸೇರಿ ದಂತೆ ಪ್ರಸಕ್ತ ಸಾಲಿನಲ್ಲಿ ಬೆಳ್ಳಿಹಬ್ಬ ಆಯೋ ಜಿಸುವ ಹಾಗೂ ವಿವಿ ವತಿಯಿಂದ ಬೃಹತ್ ಆನ್‍ಲೈನ್ ಉದ್ಯೋಗ ಮೇಳ ಆಯೋಜಿ ಸುವ ಬಗ್ಗೆಯೂ ಮಾಹಿತಿ ನೀಡಿದರು.

ಮುಂದುವರೆದು ಮಾತನಾಡಿದ ಪ್ರೊ.ಎಸ್. ವಿದ್ಯಾಶಂಕರ್, ವಿವಿ ಕೇವಲ ಪದವಿ ನೀಡುವುದಕ್ಕೆ ಸೀಮಿತಗೊಳ್ಳಬಾರದು ಎಂಬ ಉದ್ದೇಶವಿದೆ. ಈ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜನೆಗೂ ಒತ್ತು ನೀಡಲಾಗಿದೆ. ಮುಂದಿನ ಎರಡು ತಿಂಗಳ ಒಳಗೆ ಆನ್‍ಲೈನ್ ಉದ್ಯೋಗ ಮೇಳ ಆಯೋಜನೆಗೆ ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ ಎಂದರು.

ಮುಕ್ತ ಹಾಗೂ ದೂರ ಶಿಕ್ಷಣ ನೀಡುವ ಏಕೈಕ ವಿವಿಯಾಗಿ ಕಾರ್ಯನಿರ್ವಹಿಸಲು ರಾಜ್ಯ ಮುಕ್ತ ವಿವಿಗೆ ಅವಕಾಶ ಆಗು ವಂತೆ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆಗೆ ತಿದ್ದುಪಡಿ ತಂದ ಸರ್ಕಾರಕ್ಕೆ ವಿವಿ ಪರವಾಗಿ ಧನ್ಯವಾದ ತಿಳಿಸಿದರ ಲ್ಲದೆ, ರಾಜ್ಯದಲ್ಲಿ 1996ರ ಜೂ.1ರಂದು ರಾಜ್ಯ ಮುಕ್ತ ವಿವಿ ಮೈಸೂರಿನಲ್ಲಿ ಆರಂಭವಾಯಿತು. ವಿವಿ ಸ್ಥಾಪನೆಯಾಗಿ 25 ವರ್ಷಗಳಾಗಿದ್ದು, ಈ ಸಾಲಿನಲ್ಲಿ ಬೆಳ್ಳಿಹಬ್ಬ ಆಚರಿಸಲಾಗುವುದು ಎಂದು ಹರ್ಷ ವ್ಯಕ್ತಪಡಿಸಿದರು.

ಕಳೆದ ಮೂರ್ನಾಲ್ಕು ವರ್ಷ ಅನೇಕ ತೊಂದರೆಗಳನ್ನು ವಿವಿ ಮತ್ತು ವಿದ್ಯಾರ್ಥಿ ಗಳು ಅನುಭವಿಸಬೇಕಾಯಿತು. ಇದೀಗ ಇದೆಲ್ಲವನ್ನೂ ಮರೆತು ಹೊಸ ದಾಪು ಗಾಲು ಇಡಬೇಕಿದೆ. ವಿವಿಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ತಂತ್ರಜ್ಞಾನದ ಸಮರ್ಪಕ ಬಳಕೆ ಮೂಲಕ ಡಿಜಿಟಲೀ ಕರಣಕ್ಕೆ ಒತ್ತು ನೀಡಲಾಗಿದೆ. ಆ ಮೂಲಕ ಹೊಸ ಯುಗ ವಿವಿಯಲ್ಲಿ ಆರಂಭವಾಗಿದೆ. ವಿವಿ ವೆಬ್‍ಸೈಟ್ ಮರುಸ್ಥಾಪಿಸಲಾಗಿದ್ದು, ಇಲ್ಲಿ ವಿವಿಯ ಶೈಕ್ಷಣಿಕ ಚಟುವಟಿಕೆ ಯನ್ನು ತಮ್ಮ ಸಮಯಾವಕಾಶಕ್ಕೆ ಅನು ಗುಣವಾಗಿ ವಿದ್ಯಾರ್ಥಿಗಳು ತಿಳಿದು ಕೊಳ್ಳಬಹುದು ಎಂದರು.

ಪ್ರಧಾನಿಯವರ ಡಿಜಿಟಲ್ ಇಂಡಿಯಾಕ್ಕೆ ಒತ್ತು: ವಿವಿಯ ಸ್ಟುಡೆಂಟ್ ಆ್ಯಪ್ ಬಿಡು ಗಡೆ ಮಾಡಲಾಗಿದೆ. ಸ್ಟುಡೆಂಟ್ ಆ್ಯಪ್ ನಲ್ಲಿ ಎಲ್ಲಾ ಪಠ್ಯಗಳೂ ದೊರೆಯಲಿವೆ. ಆನ್‍ಲೈನ್ ಮೂಲಕವೇ ಪ್ರವೇಶಾತಿ ನೋಂದಣಿ ಸಹ ಮಾಡಲಾಗಿದೆ. ಈ ಸಂಬಂಧ ಯಾವುದೇ ದೂರುಗಳು ಬಂದಿಲ್ಲ. ಬಹುತೇಕ ಎಲ್ಲಾ ಚಟುವಟಿಕೆ ಗಳನ್ನು ಆನ್‍ಲೈನ್ ಮೂಲಕ ನಡೆಸಲು ವಿವಿ ಒತ್ತು ನೀಡಿದ್ದು, ಆ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಡಿಜಿ ಟಲ್ ಇಂಡಿಯಾ ಪರಿಕಲ್ಪನೆಗೆ ಒತ್ತು ನೀಡಿದ್ದೇವೆ. ವಿವಿಯ ಹಿರಿಯ ವಿದ್ಯಾರ್ಥಿ ಗಳ ಸಂಘ ರಚಿಸಲಾಗುತ್ತಿದೆ ಎಂದು ಪ್ರೊ.ವಿದ್ಯಾಶಂಕರ್ ಹೇಳಿದರು.

`12ಬಿ’ ಮತ್ತು ನ್ಯಾಕ್ ಮಾನ್ಯತೆಗೆ ಸಿದ್ಧತೆ: ಮುಕ್ತ ವಿವಿಗೆ ಯುಜಿಸಿಯ `12ಬಿ’ ಮಾನ್ಯತೆ ಮತ್ತು ನ್ಯಾಕ್ ಮಾನ್ಯತೆ ಪಡೆಯಲು ಸಿದ್ಧತೆ ನಡೆಸಲಾಗುತ್ತಿದೆ. ನನ್ನ ಅವಧಿ ಒಳಗೆ ಇದನ್ನು ಈಡೇರಿಸಲು ಶ್ರಮಿ ಸುತ್ತೇನೆ. `12ಬಿ’ ಪಡೆದರೆ ಅಧ್ಯಾಪಕರ ಸಂಶೋಧನೆಗೆ ಹೆಚ್ಚಿನ ಅನುದಾನ ಯುಜಿಸಿಯಿಂದ ಲಭ್ಯವಾಗಲಿದೆ. ಈ ವಿವಿ ಪದವಿ ಯಾವುದೇ ಸಂಪ್ರದಾಯಿಕ ವಿವಿಗೆ ಸಮನಾದ ಮಾನ್ಯತೆ ಹೊಂದಿದೆ. ಇದನ್ನು ಯುಜಿಸಿಯೇ ಘೋಷಣೆ ಮಾಡಿದೆ. ಕಳೆದ ಸಾಲಿನಲ್ಲಿ ವಿವಿಯ 22 ವಿದ್ಯಾರ್ಥಿಗಳು ಕೆಎಎಸ್ ಉತ್ತೀರ್ಣ ಗೊಂಡಿದ್ದಾರೆ. ಅನೇಕರು ಐಎಎಸ್ ತೇರ್ಗಡೆಯಾಗಿದ್ದಾರೆ. ವಿವಿಯು ಹತ್ತು ಹಲವು ಹೊಸ ಕಾರ್ಯಕ್ರಮ ಅನು ಷ್ಠಾನಕ್ಕೆ ಯೋಜನೆ ರೂಪಿಸುತ್ತಿದೆ ಎಂದು ಪ್ರೊ.ವಿದ್ಯಾಶಂಕರ್ ವಿವರಿಸಿದರು.

ಮುಕ್ತ ವಿವಿ ಆಡಳಿತಾಂಗ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಪರೀಕ್ಷಾಂಗ ಕುಲಸಚಿವರಾದ ಡಾ.ಕವಿತಾರೈ, ವಿವಿ ಅಧ್ಯಾಯನ ಕೇಂದ್ರದ ಡೀನ್ ಡಾ. ಷಣ್ಮುಖ, ಶೈಕ್ಷಣಿಕ ಡೀನ್ ಪ್ರೊ.ಕಾಂಬ್ಲೆ ಅಶೋಕ್, ಶೈಕ್ಷಣಿಕ ವಿಭಾಗದ ವಿಶೇ ಷಾಧಿಕಾರಿ ಡಾ.ರಾಜೇಶ್ವರಿ, ಸಿಐಕ್ಯೂಎ ನಿರ್ದೇಶಕ ಡಾ.ಎಸ್.ನಿರಂಜನ್‍ರಾಜ್ ಮತ್ತಿತರರು ಹಾಜರಿದ್ದರು.

ಮುಕ್ತ ಗಂಗೋತ್ರಿಯಲ್ಲಿ ವಸತಿ ಸಹಿತ  ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಸ್ಥಾಪನೆ
ಇದು ವಿವಿ ಉದ್ದೇಶಿತ ಮಹತ್ವದ ಯೋಜನೆ; ಪ್ರೊ.ಲಿಂಗರಾಜ ಗಾಂಧಿ
ಮೈಸೂರು,ಜ.18(ಪಿಎಂ)- ಮುಕ್ತ ವಿವಿಯ ಬೆಳ್ಳಿಹಬ್ಬ ಸ್ಮರಣಾರ್ಥ ಮುಕ್ತ ಗಂಗೋತ್ರಿ ಆವರಣದಲ್ಲಿ ಸುಸಜ್ಜಿತ ವಸತಿಯುಕ್ತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ನಿರ್ಮಿಸುವ ಉದ್ದೇಶಿತ ಯೋಜನೆ ವಿವಿ ಮುಂದಿದೆ ಎಂದು ವಿವಿ ಕುಲಸಚಿವ (ಆಡಳಿತ) ಪ್ರೊ.ಲಿಂಗರಾಜ ಗಾಂಧಿ ತಿಳಿಸಿದರು.

`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗೆ ನಮ್ಮಲ್ಲಿ ತರಬೇತಿ ನೀಡಲಾಗುತ್ತಿದೆ. ಆದರೆ ಬೆಳ್ಳಿಹಬ್ಬದ ಸಂದರ್ಭದಲ್ಲಿ ಸುಸಜ್ಜಿತ ವಸತಿಸಹಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಉನ್ನತ ಮಟ್ಟದ ತರಬೇತಿಗೆ ದೂರದ ದೆಹಲಿಯತ್ತ ಮುಖ ಮಾಡುವುದು ತಪ್ಪುತ್ತದೆ. 24 ಗಂಟೆ ಕಾರ್ಯನಿರ್ವಹಿಸುವಂತಹ ಕೇಂದ್ರ ಇದಾಗಲಿದೆ. ಬೆಳ್ಳಿಹಬ್ಬವನ್ನು ವರ್ಷಪೂರ್ತಿ ಆಚರಿಸಲು ವೈವಿಧ್ಯಮಯ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಫೆ.5 ಮತ್ತು 6ರಂದು ಯುಜಿಸಿ ಸಮಿತಿ ಭೇಟಿ: ಯುಜಿಸಿಯ `12ಬಿ’ ಮಾನ್ಯತೆ ಮತ್ತು ನ್ಯಾಕ್ ಮಾನ್ಯತೆ ಪಡೆಯುವ ಸಂಬಂಧ ವಿವಿ ಸಿದ್ಧತೆ ನಡೆಸುತ್ತಿದೆ. ಇದೇ ಫೆ.5 ಮತ್ತು 6ರಂದು ಯುಜಿಸಿ ಸಮಿತಿ ವಿವಿಗೆ ಭೇಟಿ ನೀಡಿ ಈ ಸಂಬಂಧ ಮೌಲ್ಯಮಾಪನ ಮಾಡಲಿದೆ. ಶೀಘ್ರದಲ್ಲಿ ಆಯೋಜಿಸಲಿರುವ ಆನ್‍ಲೈನ್ ಉದ್ಯೋಗ ಮೇಳಕ್ಕೆ ಆನ್‍ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳಬೇಕು. ಉದ್ಯೋಗದಾತರು ಆನ್‍ಲೈನ್ ಮೂಲಕ ಸಂದರ್ಶನ ನಡೆಸಲಿದ್ದಾರೆ ಎಂದು ವಿವರಿಸಿದರು. ಕಳೆದ ಸಾಲಿನಲ್ಲಿ ವಿವಿಗೆ ಸುಮಾರು 10 ಸಾವಿರ ಮಂದಿ ವಿವಿಧ ಕೋರ್ಸ್‍ಗಳಿಗೆ ಪ್ರವೇಶ ಪಡೆದಿದ್ದರು. ಈ ಬಾರಿ 7 ಸಾವಿರ ಹೆಚ್ಚುವರಿಯಾಗಿ ಪ್ರವೇಶ ಪಡೆದಿದ್ದಾರೆ. 2018ರಲ್ಲಿ ಯುಜಿಸಿಯಿಂದ ವಿವಿ ಮರು ಮಾನ್ಯತೆ ಪಡೆದ ಬಳಿಕ ನಡೆಯುತ್ತಿರುವ ಎರಡನೇ ಪ್ರವೇಶಾತಿ ಇದಾಗಿದೆ ಎಂದರು.

 

 

Translate »