ಅಯೋಧ್ಯೆ ರಾಮಮಂದಿರ ಗರ್ಭಗುಡಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಶಂಕುಸ್ಥಾಪನೆ
News

ಅಯೋಧ್ಯೆ ರಾಮಮಂದಿರ ಗರ್ಭಗುಡಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಶಂಕುಸ್ಥಾಪನೆ

June 2, 2022

ಲಖನೌ,ಜೂ.1-ಹಿಂದೂಗಳ ದಶಕಗಳ ಕನಸಾದ ಅಯೋಧ್ಯೆ ರಾಮಮಂದಿರ ನಿರ್ಮಾಣ ಮಹತ್ವದ ಘಟ್ಟ ತಲುಪಿದೆ. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ಗರ್ಭಗುಡಿಗೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.

ಅಯೋಧ್ಯೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಮಮಂದಿರದ ಗರ್ಭಗುಡಿಯ ಮೊದಲ ಶಿಲೆಗೆ ಪೂಜೆ ಸಲ್ಲಿಸಿದರು. ಮಂದಿರ ನಿರ್ಮಾಣದ ಹೊಣೆ ಹೊತ್ತ ರಾಮ ಜನ್ಮಭೂಮಿ ಟ್ರಸ್ಟ್, ದೇವಾಲಯದ ಗರ್ಭಗುಡಿಯನ್ನು ರಾಜಸ್ಥಾನದ ಮಖ್ರಾನಾ ಬೆಟ್ಟದಿಂದ ತರಿಸಲಾದ ಬಿಳಿ ಅಮೃತ ಶಿಲೆಯಿಂದ ನಿರ್ಮಾಣ ಮಾಡಲಾಗುವುದು. ಸುಮಾರು 13,300 ಕ್ಯೂಬಿಕ್ ಅಡಿ ಅಮೃತ ಶಿಲೆಯನ್ನು ಬಳಸಲಾಗುವುದು ಎಂದು ಹೇಳಿದೆ. ದೇವಾಲಯದ ಗರ್ಭಗುಡಿಯ ನಿರ್ಮಾಣ ಕಾಮಗಾರಿಯು 2023ರ ಅಂತ್ಯದೊಳಗೆ ಹಾಗೂ ಇಡೀ ರಾಮಮಂದಿರದ ನಿರ್ಮಾಣ ಕಾಮಗಾರಿಯು 2024ರ ಅಂತ್ಯದೊಳಗೆ ಮುಕ್ತಾಯವಾಗಬಹುದು ಎನ್ನಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಗಸ್ಟ್ 2020ರಲ್ಲಿ ರಾಮಮಂದಿರದ ಭೂಮಿ ಪೂಜೆ ನಡೆಸಿ, ಶಂಕುಸ್ಥಾಪನೆ ನೆರವೇರಿಸಿದ್ದರು.

ಮದ್ಯಪಾನ ನಿಷೇಧ: ರಾಮಮಂದಿರ ನಿರ್ಮಾಣವಾಗುವ ಅಯೋಧ್ಯೆಯಲ್ಲಿ ಮದ್ಯ ಪಾನ ನಿಷೇಧಿಸಲು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶ ನೀಡಿದೆ. ಉತ್ತರ ಪ್ರದೇಶದ ಅಬಕಾರಿ ಖಾತೆ ರಾಜ್ಯ ಸಚಿವ (ಸ್ವತಂತ್ರ ಉಸ್ತು ವಾರಿ) ನಿತಿನ್ ಅಗರ್ವಾಲ್ ಅವರು ಅಯೋಧ್ಯೆಯ `ಶ್ರೀರಾಮ ಮಂದಿರ’ ಪ್ರದೇಶದಲ್ಲಿನ ಎಲ್ಲಾ ಮದ್ಯದಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

Translate »