ಮೈಸೂರು, ಸೆ.14(ಆರ್ಕೆಬಿ)- `ಅಲ್ ಜೈಮರ್’ ಕಾಯಿಲೆ ಬಗ್ಗೆ ಜನಜಾಗೃತಿ ಮೂಡಿ ಸುವ ನಿಟ್ಟಿನಲ್ಲಿ ಸೆ.30ರಂದು ಮೈಸೂರಿನಲ್ಲಿ ಫೋರಂ ಪರ್ಪಲ್ ರನ್ ಹಾಫ್ ಮ್ಯಾರಥಾನ್ ಏರ್ಪಡಿಸ ಲಾಗಿದೆ ಎಂದು ವ್ಯವಸ್ಥಾಪಕ ಧನಶೇಖರ್ ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ತಿಳಿಸಿದರು.
3 ಕಿ.ಮೀ. (ಕುಟುಂಬ ಓಟ), 5 ಕಿ.ಮೀ., 10 ಕಿ.ಮೀ ಮತ್ತು 21 ಕಿ.ಮೀ. ಹಾಫ್ ಮ್ಯಾರಥಾನ್ ನಡೆಯಲಿದೆ. ಅಂದು ಬೆಳಿಗ್ಗೆ 5.30 ಗಂಟೆಗೆ ಫೋರಂ ಸೆಂಟರ್ ಸಿಟಿ ಮಾಲ್ ಆವರಣದಿಂದ ಫೋರಂ ಪರ್ಪಲ್ ರನ್ ಹಾಫ್ ಮ್ಯಾರಥಾನ್ ಆರಂಭವಾಗಿ ಅದೇ ಸ್ಥಳದಲ್ಲಿ ಅಂತ್ಯಗೊಳ್ಳಲಿದೆ. `ಅಲ್ ಜೈಮರ್ಕಾಯಿಲೆಯಿಂದ ಭಾರತದಲ್ಲಿ 4 ಮಿಲಿಯನ್ಗೂ ಮೇಲ್ಪಟ್ಟು ಒಂದು ರೀತಿಯ ಡೀಮೆಂಟಿಯಾ (ಬುದ್ದಿಮಾಂಧ್ಯತೆ)ದಿಂದ ಬಳಲುತ್ತಿದ್ದಾರೆ. ಅಲ್ಲದೆ ಮಾನಸಿಕ ರೋಗಕ್ಕೂ ಇದು ಕಾರಣವಾಗಿದೆ. ಆದ್ದರಿಂದ, ಮೆದುಳಿನ ಆರೋಗ್ಯದ ಉನ್ನತೀಕರಣದ ಮೂಲಕ ಬುದ್ದಿ ಮಾಂದ್ಯ ತೊಂದರೆಯನ್ನು ಕಡಿಮೆ ಮಾಡುವುದು ಅಗತ್ಯ. ಈ ರೋಗ ನಿರ್ಮೂಲನೆಗೆ ಹೆಚ್ಚಿನ ರೀತಿಯ ಪ್ರಯತ್ನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಇದೊಂದು ನಮ್ಮ ಸಣ್ಣ ಪ್ರಯತ್ನ. ರೋಗ ಕುರಿತು ಅರಿವು ಮೂಡಿಸಲು ಹಲವು ಸಂಸ್ಥೆಗಳ ಸಹಯೋಗದಲ್ಲಿ ಈ ಸ್ಪರ್ಧೆ ಏರ್ಪಡಿಸಲಾಗಿದೆ. ಇಲ್ಲಿ ಸಂಗ್ರಹವಾಗುವ ಹಣವನ್ನು ಬೆಂಗಳೂರಿನ ನಿಮ್ಹಾನ್ಸ್ನ ಅಲ್ಜೈಮರ್ ವಿಭಾಗಕ್ಕೆ ದೇಣಿಗೆ ನೀಡಲಾಗುವುದು ಎಂದು ಹೇಳಿದರು.
ಭಾರತದಲ್ಲಿಯೆ ಅತೀ ದೊಡ್ಡದಾದ ಓಟವನ್ನು ಮೈಸೂರು ಸೇರಿದಂತೆ ದೇಶದ 6 ನಗರಗಳಲ್ಲಿ ಅಂದರೆ ಮೈಸೂರು, ಮಂಗಳೂರು, ಬೆಂಗಳೂರು, ಹೈದರಾಬಾದ್, ಉದಯ್ ಪುರ್ ಮತ್ತು ಚೆನ್ನೈ ನಗರಗಳಲ್ಲಿ ಏಕ ಕಾಲದಲ್ಲಿ ನಡೆಸಲಾಗುತ್ತಿದೆ. ಒಟ್ಟಾರೆ 26 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುವ ಸಾಧ್ಯತೆಯಿದ್ದು, ಮ್ಯಾರಥಾನ್ ಇತಿಹಾಸದಲ್ಲಿಯೇ ಇದು ಹೆಚ್ಚು ಮಂದಿ ಭಾಗವಹಿಸುವ ದಾಖಲೆಯಾಗಲಿದೆ ಎಂದರು. ಅದೇ ದಿನ ಮೈಸೂರಿನಲ್ಲಿ ನಡೆಯುವ ಮ್ಯಾರಥಾನ್ಗೆ ಈಗಾಗಲೇ 400 ಮಂದಿ ಹೆಸರು ನೋಂದಾಯಿಸಿದ್ದು, ಒಂದು ಸಾವಿರ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
https:/www.forummalls.in/forumpurplerun ಇಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ವಿವರಗಳನ್ನು 0821-2300402 ಅಥವಾ 9606080818 ಹಾಗೂ [email protected] ಸಂಪರ್ಕಿಸಬಹುದಾಗಿದೆ ಎಂದರು. ಗೋಷ್ಠಿಯಲ್ಲಿ ಮಾರುಕಟ್ಟೆ ವ್ಯವಸ್ಥಾಪಕ ಕಾರ್ತಿಕ್, ರಘುಕುಮಾರ್ ಇದ್ದರು.