ಚಾಮರಾಜನಗರ,ಮಾ.9-ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಣೆ ವೇಳೆ ಪಟ್ಟಣ ವ್ಯಾಪ್ತಿಯಲ್ಲಿ ಬಾಕಿ ಉಳಿದಿರುವÀ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿ ಸುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ 209ರ ಕಾಮಗಾರಿಗೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಗರ, ಪಟ್ಟಣ ಸೇರಿದಂತೆ ಹೆದ್ದಾರಿ ಹಾದು ಹೋಗಿರುವ ಮಾರ್ಗಗಳಲ್ಲಿ ಜಂಕ್ಷನ್ ಕೇಂದ್ರಗಳು ಸರಿಯಾದ ರೀತಿ ನಿರ್ವಹಣೆಯಾಗಬೇಕಿದೆ. ವಿದ್ಯುತ್ ದೀಪ ಗಳ ಅಳವಡಿಕೆ, ಸಂಚಾರ ಫಲಕಗಳು, ಸೂಚನಾ ದೀಪಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಬೇಕಿದೆ. ರಸ್ತೆ ಪಕ್ಕದಲ್ಲಿ ನಿಯಮಾನು ಸಾರ ಕಲ್ಪಿಸಬೇಕಿರುವ ಸೌಲಭ್ಯಗಳನ್ನು ಪೂರ್ಣಗೊಳಿಸಬೇಕು. ಬಾಕಿ ಉಳಿದಿರುವ ಕಾಮಗಾರಿ ಸಂಬಂಧ ಅಂದಾಜು ಪಟ್ಟಿ ಸಿದ್ಧಪಡಿಸಬೇಕು ಎಂದರು.
ಜಿಲ್ಲೆಯಲ್ಲಿ ಕೈಗೆತ್ತಿಕೊಂಡಿರುವ ಹೆದ್ದಾರಿ ಕಾಮಗಾರಿ ಕಾಲಮಿತಿಯೊಳಗೆ ಮುಗಿಸ ಬೇಕು. ಸೂಚಿಸಲಾಗಿರುವ ಗಡುವಿ ನೊಳಗೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ಅನೂಕೂಲ ಕಲ್ಪಿಸಬೇಕು. ಯೋಜನೆಯಲ್ಲಿ ವಿಧಿಸಲಾಗಿರುವ ನಿಯಮ ಹಾಗೂ ಷರತ್ತುಗಳಿಗೆ ಬದ್ಧರಾ ಗಿರಬೇಕು. ರಸ್ತೆ ಕೆಲಸವು ಅತ್ಯಂತ ಪ್ರಮುಖವಾಗಿರುವುದರಿಂದ ಆದ್ಯತೆ ಮೇರೆಗೆ ಯೋಜನೆ ಪೂರ್ಣವಾಗಬೇಕು ಎಂದು ನಿರ್ದೇಶನ ನೀಡಿದರು.
ಹೆದ್ದಾರಿ ಕಾಮಗಾರಿ ಪೂರ್ಣ ಸಂಬಂಧ ಅಡಚಣೆಗಳಿದ್ದಲ್ಲಿ ನಿವಾರಣೆಗೆ ಕ್ರಮ ತೆಗೆದುಕೊಳ್ಳಬೇಕು. ಹೆದ್ದಾರಿಗಳಲ್ಲಿ ಪರಿಹಾರ ಕಾರ್ಯ ಬಾಕಿ ಇದ್ದಲ್ಲಿ ಈ ಸಂಬಂಧ ಅಗತ್ಯ ಪ್ರಕ್ರಿಯೆ ತುರ್ತಾಗಿ ಕೈಗೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಉಪ ವಿಭಾಗಾ ಧಿಕಾರಿಗಳು ಎದುರಾಗಿರುವ ತೊಡಕಿನ ಬಗ್ಗೆ ಚರ್ಚಿಸಿ ಕಾಮಗಾರಿ ಸಂಪೂರ್ಣ ಗೊಳಿಸಲು ಅವಶ್ಯಕ ಪ್ರಕ್ರಿಯೆ ಕೈಗೊಳ್ಳ ಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ನಿಖಿತಾ ಎಂ.ಚಿನ್ನಸ್ವಾಮಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ವ್ಯವಸ್ಥಾಪಕ ಶ್ರೀಧರ್, ವಿಶೇಷ ಭೂ ಸ್ವಾಧೀನಾಧಿಕಾರಿ ರಾಜೇಂದ್ರ ಪ್ರಸಾದ್, ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುರೇಶ್ ಕುಮಾರ್, ತಹಶೀಲ್ದಾರ್ ಕೆ.ಕುನಾಲ್, ನಗರಸಭೆ ಆಯುಕ್ತ ರಾಜಣ್ಣ, ನಾಗಶೆಟ್ಟಿ ಇನ್ನಿತರ ಅಧಿಕಾರಿಗಳು ಹಾಜರಿದ್ದರು.