ಕಾರ್ಮಿಕ ಕಾರ್ಯದರ್ಶಿ ಮಣಿವಣ್ಣನ್ ಆದೇಶ
ಬೆಂಗಳೂರು, ಏ. 13- ಕೋವಿಡ್-19 ತುರ್ತು ಪರಿಸ್ಥಿತಿಯ ಸನ್ನಿವೇಶದಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳ ಮಾಲೀಕರು ಯಾವುದೇ ಕಾರಣಕ್ಕೂ ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಬಾರದು ಎಂದು ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ. ಕ್ಯಾಪ್ಟನ್ ಮಣಿವಣ್ಣನ್ ಆದೇಶ ಹೊರಡಿಸಿದ್ದಾರೆ.
ಗುತ್ತಿಗೆ ಕಾರ್ಮಿಕರನ್ನೂ ಕೂಡ ಕೆಲಸದಿಂದ ವಜಾ ಮಾಡಬಾರದು. ಅವರ ವೇತನವನ್ನು ಕಡಿತಗೊಳಿಸಬಾರದು. ಕೆಲಸಗಾರರು ಈ ಅವಧಿಯಲ್ಲಿ ರಜೆ ಪಡೆದಿದ್ದರೂ ಅವರು ಕರ್ತವ್ಯದಲ್ಲಿದ್ದಾರೆಂದು ಪರಿಗಣಿಸಬೇಕೇ ಹೊರತು, ಅವರ ವೇತನವನ್ನು ಕಡಿತಗೊಳಿಸಬಾರದು. ಕೋವಿಡ್-19ರ ಕಾರಣದಿಂದಾಗಿ ಉದ್ಯೋಗ ಸ್ಥಳದಲ್ಲಿ ಕಾರ್ಯ ನಿರ್ವಹಿಸದೇ ಇರುವ ಸಂದರ್ಭ ಉಂಟಾದಲ್ಲಿ ಅಂತಹ ನೌಕರರೂ ಕೂಡ ಕರ್ತವ್ಯದಲ್ಲಿದ್ದಾರೆಂದು ಪರಿಗಣಿಸಬೇಕು ಎಂದು ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಯಾವುದೇ ನಿಯಮ ಉಲ್ಲಂಘಿಸಿದರೆ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯಿದೆ 2005ರಡಿ ಕ್ರಮ ಕೈಗೊಳ್ಳಲಾಗು ತ್ತದೆ ಎಂದಿರುವ ಅವರು, ಕಾರ್ಮಿಕ ಇಲಾಖೆಯು ಈ ನಿಟ್ಟಿನಲ್ಲಿ 48 ಗಂಟೆಗಳೊಳ ಗಾಗಿ ಸಹಾಯವಾಣಿ ಸ್ಥಾಪಿಸಲು ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.