ಮೈಸೂರು, ಏ.13(ಎಸ್ಬಿಡಿ)- ಸಮರ್ಪಕ ಮೂಲ ಸೌಕರ್ಯವಿಲ್ಲ ಎಂದು ಮೈಸೂರಿನ ಎಪಿಎಂಸಿಯಲ್ಲಿ ಕೆಲ ಕಾಲ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದ ಘಟನೆ ಸೋಮವಾರ ನಡೆದಿದೆ.
ಈ ವಿಚಾರವಾಗಿ ವ್ಯಾಪಾರಿಗಳು ಮತ್ತು ಕಮಿಷನ್ ಏಜೆಂಟರು ಎಪಿಎಂಸಿ ವಿರುದ್ಧ ಹರಿಹಾಯ್ದರಲ್ಲದೆ, ಪೊಲೀಸರು ಸಹಕಾರ ನೀಡುತ್ತಿಲ್ಲ ಎಂದು ದೂರಿ ದರು. ಗದ್ದಲವಾಗಿ ಕೆಲ ಕಾಲ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಕೂಡಲೇ ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ತಹಶೀಲ್ದಾರ್ ರಕ್ಷಿತ್ ಮತ್ತು ಡಿವೈಎಸ್ಪಿ ಎ.ಆರ್.ಸುಮಿತ್ ಭೇಟಿ ನೀಡಿ, ವ್ಯಾಪಾರಿಗಳು ಹಾಗೂ ಕಮಿಷನ್ ಏಜೆಂಟರ್ಗಳನ್ನು ಸಮಾಧಾನಪಡಿ ಸಿದ್ದಲ್ಲದೆ, ಒಡೆದಿದ್ದ ಶೌಚಾಲಯದ ಪೈಪ್ ಅನ್ನು ತಕ್ಷಣ ದುರಸ್ತಿ ಮಾಡಿಸಲಾಯಿತು.
ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ, ವ್ಯಾಪಾರ ವಹಿವಾಟಿ ನಲ್ಲಿ ವ್ಯತ್ಯಯವಾದರೆ ರೈತರಿಗೆ ತೀವ್ರ ಸಂಕಷ್ಟ ಎದುರಾ ಗುತ್ತದೆ. ಅಲ್ಲದೆ ಅಗತ್ಯ ವಸ್ತುಗಳು ಸಿಗದೆ ಸಾರ್ವಜನಿ ಕರಿಗೂ ತೊಂದರೆಯಾಗುತ್ತದೆ ಎಂದು ಮನವಿ ಮಾಡಿಕೊಂಡರು. ತಹಶೀಲ್ದಾರ್ ರಕ್ಷಿತ್ ಮಾತನಾಡಿ, ಎಪಿಎಂಸಿಗೆ ಸಂಬಂಧಪಟ್ಟವರಿಗೆ ಪೊಲೀಸರಿಂದ ಯಾವುದೇ ಅಡ್ಡಿಯಿಲ್ಲ. ಎಲ್ಲಾ ಸರಕು ಸಾಗಣೆ ವಾಹನಗಳಿಗೂ ನಿರ್ಬಂಧದಿಂದ ವಿನಾಯ್ತಿಯಿದೆ. ಸಂಬಂಧಪಡದವರ ಪ್ರವೇಶವನ್ನು ತಡೆಯಲು ಮತ್ತಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ ತಿಳಿಸಿದರು.
ಹೊಸ ಪಾಸ್ ವ್ಯವಸ್ಥೆ: ಬುಧವಾರದಿಂದ ಎಪಿಎಂಸಿ ಪ್ರವೇಶಕ್ಕೆ ಹೊಸ ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಲಾ ಗುವುದು. ಎಪಿಎಂಸಿ ಕಾರ್ಮಿಕರನ್ನು ಹೊರತುಪಡಿಸಿ, ಬೇರೆ ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ ಡಿವೈಎಸ್ಪಿ ಸುಮಿತ್, ನಿಯಮಗಳನ್ನು ಉಲ್ಲಂಘಿಸಿ, ಪರಿಸ್ಥಿತಿಯ ಲಾಭ ಪಡೆಯಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.