ಮೈಸೂರು, ಸೆ.22(ಆರ್ಕೆಬಿ)- ಚಾಮುಂಡಿಬೆಟ್ಟದಲ್ಲಿ ಮೂಲನಿವಾಸಿಗಳ ಪಾಳೆಗಾರ ಕಾರ್ಗಳ್ಳಿ ಮಾರನಾಯಕನ ಪುತ್ಥಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಮೈಸೂರು ನಾಯಕರ ಪಡೆ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸ ಲಾಯಿತು. 13ನೇ ಶತಮಾನದ ಕಾಲಘಟ್ಟದಲ್ಲಿ ಮೈಸೂರಿನಲ್ಲಿ ಪಾಳೇಗಾರ ಮಾರನಾಯ ಕರು ಆಳ್ವಿಕೆ ನಡೆಸುತ್ತಿದ್ದರೆಂಬುದು ಇತಿಹಾಸ. ಮೈಸೂರಿನ ಮೂಲ ನಿವಾಸಿಗಳ ಪಾಳೇಗಾರ ಮಾರನಾಯಕನ ಇತಿಹಾಸವನ್ನು ಬಚ್ಚಿಡುವಂತಹ ಕೆಲಸ ವ್ಯವಸ್ಥಿತವಾಗಿ ನಡೆದು ಬಂದಿದೆ. ಹಾಗಾಗಿ ಇಂತಹ ನಾಯಕನ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಚಾಮುಂಡಿಬೆಟ್ಟದಲ್ಲಿ ಪಾಳೇಗಾರ ಮಾರನಾಯಕನ ಪುತ್ಥಳಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಪಡುವಾರಹಳ್ಳಿ ಎಂ.ರಾಮಕೃಷ್ಣ, ದೇವರಾಜ್ ಟಿ.ಕಾಟೂರ್, ದ್ಯಾವಪ್ಪ ನಾಯಕ, ಟೆನ್ನಿಸ್ ಗೋಪಿ, ರಮ್ಮನಹಳ್ಳಿ ಸೋಮಣ್ಣ, ಬೆಟ್ಟ ಶ್ರೀಧರ್, ಹಿನಕಲ್ ಚಂದ್ರು, ಗೋವಿಂದರಾಜು, ಯಡಕೊಳ ನಾಗೇಂದ್ರ, ಅಜಯ್, ಪ್ರಕಾಶ್ ಇನ್ನಿತರರು ಭಾಗವಹಿಸಿದ್ದರು.
