ಸಂಚಾರ ಸ್ತಬ್ಧ
ವಾಣಿಜ್ಯ ವಹಿವಾಟು ಬಂದ್
ಬಿಕೋ ಎನ್ನುತ್ತಿದ್ದ ರಸ್ತೆಗಳು
ಬೀದಿಗಿಳಿದ ಭಂಡರಿಗೆ ಪೊಲೀಸರ ಲಾಠಿ ರುಚಿ
ಪರಿಸ್ಥಿತಿ ಸ್ವಯಂ ಅರ್ಥ ಮಾಡಿಕೊಂಡ ಜನತೆ
ಬೆಂಗಳೂರು, ಏ.24(ಕೆಎಂಶಿ)- ರೂಪಾಂತರಗೊಂಡಿರುವ ವೈರಸ್ನ ಕೊಂಡಿ ಕಳಚಲು ಸರ್ಕಾರ ಜಾರಿಗೆ ತಂದ ವಾರಾಂತ್ಯದ ಕಫ್ರ್ಯೂಗೆ ಜನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ಸಂದರ್ಭಕ್ಕಿಂತಲೂ ಹೆಚ್ಚಿನ ಬೆಂಬಲ ವಾರಾಂತ್ಯದ ಕಫ್ರ್ಯೂಗೆ ದೊರೆತಿದ್ದು, ಇದನ್ನು ಇಡೀ ವಾರಕ್ಕೆ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಸೋಮವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕಫ್ರ್ಯೂ ವಿಸ್ತರಣೆ ಮತ್ತು ಮೇ 1 ರಿಂದ ನೀಡುವ ಲಸಿಕೆ ಉಚಿತವಾಗಿ ನೀಡಬೇಕೇ, ಬೇಡವೇ ಎಂಬ ಬಗ್ಗೆ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನತೆಯು ದಿಗ್ಭ್ರಾಂತರಾಗಿದ್ದಾರೆ. ನಗರ ಪಟ್ಟಣ ಪ್ರದೇಶಗಳಲ್ಲಂತೂ, ಕಫ್ರ್ಯೂ ಬೆಂಬಲಕ್ಕೆ ನಿಂತಿದ್ದಾರೆ.
ಅವಶ್ಯಕ ಸೇವೆಗಳಿಗೆ ತೆರಳುವವರು ಗುರುತಿನ ಚೀಟಿ ತೋರಿ ಸಿದರೆ, ಅಂತಹವರು ತಮ್ಮ ಪ್ರಯಾಣ ಮುಂದುವರೆಸಲು ಪೊಲೀಸರು ಅವಕಾಶ ಮಾಡಿಕೊಟ್ಟರು. ಇನ್ನು ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಕಫ್ರ್ಯೂ ಅಡ್ಡಿ ಬರಲಿಲ್ಲ.
ಸೋಂಕಿಗೂ ಬೆದರದೆ ಬೀದಿಗಿಳಿದ ಕೆಲವರ ಮೇಲೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಿಯಮ ಮೀರಿ ವ್ಯಾಪಾರ ನಡೆಸುತ್ತಿರುವವರಿಗೂ ದಂಡ ಹಾಕಿದ್ದಾರೆ. ಬೆಳಗಿನ ಅವಧಿಯಲ್ಲಿ ಜನ ಸ್ವಲ್ಪ ರಸ್ತೆಗಿಳಿ ದರಾದರೂ, ನಂತರ ಎಚ್ಚೆತ್ತುಕೊಂಡು ಮನೆ ಬಿಟ್ಟು ಬರಲಿಲ್ಲ. ಕೆಲವು ಭಂಡರು ಬೀದಿ ಗಿಳಿಯುವ ಪ್ರಯತ್ನ ಮಾಡಿದಾಗ ಪೊಲೀಸರು ಲಾಠಿ ರುಚಿ ತೋರಿಸಿ ದ್ದಾರೆ. ಆರೋಗ್ಯ ಸೇವೆ ಹೊರತು ಪಡಿಸಿ, ಉಳಿದೆಲ್ಲವೂ ಬಹು ತೇಕ ಬಂದ್ ಆಗಿತ್ತು. ರಾಜಧಾನಿ ರಸ್ತೆಗಳು ಭಣಗುಡುತ್ತಿದ್ದವು. ರಾಜ್ಯ ರಸ್ತೆ ಸಾರಿಗೆಯ ಕೆಲವು ಬಸ್ಗಳು ರಸ್ತೆಗಿಳಿದಿದ್ದು, ಅವುಗಳಿಗೆ ಪ್ರಯಾಣಿಕರೇ ಇರಲಿಲ್ಲ.
ಇನ್ನು ಹೊರ ಊರುಗಳಿಗೆ ತೆರಳು ವವರು ನಿನ್ನೆಯೇ ತಮ್ಮ ಸ್ಥಳವನ್ನು ಸೇರಿಕೊಂಡಿದ್ದರು. ಇಂದು ನಾಲ್ಕನೇ ಶನಿವಾರ ಮತ್ತು ಭಾನುವಾರವಾ ಗಿದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸೇವೆಗಳು ಸೇರಿದಂತೆ ಬ್ಯಾಂಕ್ ವಹಿವಾಟುಗಳಿಗೆ ರಜೆ ಇದ್ದವು.
ಹೀಗಾಗಿ ಅವುಗಳು ಕಾರ್ಯನಿರ್ವ ಹಿಸದಿರುವುದರಿಂದ ನೌಕರರು ಮತ್ತು ಗ್ರಾಹಕರು ಅತ್ತ ಸುಳಿಯಲಿಲ್ಲ.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವ ರಾಜ್ ಬೊಮ್ಮಾಯಿ ಕೊರೊನಾ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ತೀವ್ರವಾಗಿದೆ. ನಿಯಂತ್ರಣಕ್ಕೆ ಸಹಕಾರ ಕೊಡುತ್ತಿದ್ದಾರೆ. ಅವರಲ್ಲೂ ಅರಿವು ಮೂಡಿರುವುದರಿಂದ ಕಫ್ರ್ಯೂ ಯಶಸ್ವಿಯಾಗಿದೆ ಎಂದರು. ಜನರ ಜವಾಬ್ದಾರಿ ಅರ್ಥ ಮಾಡಿಕೊಂಡು, ಕೊರೊನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದರೆ, ಸಾಂಕ್ರಾಮಿಕ ಕೊಂಡಿಯನ್ನು ಕಳಚಬಹುದಾಗಿದೆ ಎಂದರು. ಕಫ್ರ್ಯೂ ಸಂದರ್ಭದಲ್ಲಿ ಯಾವ ರೀತಿ ಬೆಂಬಲ ನೀಡುತ್ತಿ ದ್ದಾರೋ ಅದೇ ರೀತಿ ಉಳಿದ ಸಂದರ್ಭ ದಲ್ಲೂ ನೀಡಬೇಕೆಂದು ಮನವಿ ಮಾಡಿಕೊಂಡರು. ಸೋಮವಾರ ನಡೆಯುವ ಸಂಪುಟ ಸಭೆಯಲ್ಲಿ ಸೋಂಕು ನಿವಾರಣೆಗಾಗಿ ಕೆಲವು ಕಠಿಣ ತೀರ್ಮಾನಗಳನ್ನು ರಾಜ್ಯ ಸರ್ಕಾರ ಕೈಗೊಳ್ಳಲಿದೆ ಎಂದರು.