ಬೆಂಗಳೂರು, ಜು. 19(ಕೆಎಂಶಿ)- ಪ್ರದೇಶ ಕಾಂಗ್ರೆಸ್ ಪದಾಧಿಕಾರಿಗಳ ಪುನಾ ರಚನೆಗೆ ಸಂಬಂಧಿಸಿದಂತೆ ವರಿಷ್ಠರ ಜೊತೆ ಚರ್ಚೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ದೆಹಲಿಗೆ ತೆರಳಿದ್ದಾರೆ. ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸೇರಿದಂತೆ ಪ್ರಮುಖ ನಾಯಕರೊಟ್ಟಿಗೆ ಸಮಾಲೋಚನೆ ನಡೆಸಿ, ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸಲಿದ್ದಾರೆ.
ಅಲ್ಲದೆ ಕೆಲವು ಜಿಲ್ಲೆಗಳಿಗೆ ಹೊಸ ಅಧ್ಯಕ್ಷರ ನೇಮಕಾತಿಯು ಆಗಲಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಶಿವಕುಮಾರ್ ಒಂದು ದೊಡ್ಡ ಕಾರ್ಯಪಡೆ ರಚನೆಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಪಕ್ಷದಲ್ಲಿ ಪುನಾರಚನೆ ಮಾಡಲು ಹೊರಟಿರುವ ಶಿವಕುಮಾರ್, ದೆಹಲಿಗೂ ಅವರ ಜೊತೆಯೇ ತೆರಳಿದ್ದಾರೆ. ಉಭಯ ನಾಯಕರು ಎರಡು ದಿನಗಳ ಕಾಲ ದೆಹಲಿಯಲ್ಲೇ ಬಿಡಾರ ಹೂಡಿ, ಪದಾಧಿಕಾರಿಗಳ ಪಟ್ಟಿಯ ಜೊತೆಗೆ ಕಾಂಗ್ರೆಸ್ನ ಮುಂದಿನ ಹೋರಾಟದ ಬಗ್ಗೆಯು ರೂಪುರೇಷೆ ಸಿದ್ಧಪಡಿಸಲಿದ್ದಾರೆ.