ಕೊರೊನಾ ಪರಿಸ್ಥಿತಿ ಎದುರಿಸಲು ಬಿಜೆಪಿಯಿಂದ 5,000 ಕೋಟಿ ನಿಧಿ ಸಂಗ್ರಹ ಗುರಿ!
ಮೈಸೂರು

ಕೊರೊನಾ ಪರಿಸ್ಥಿತಿ ಎದುರಿಸಲು ಬಿಜೆಪಿಯಿಂದ 5,000 ಕೋಟಿ ನಿಧಿ ಸಂಗ್ರಹ ಗುರಿ!

April 5, 2020

ನವದೆಹಲಿ, ಏ. 4- ಕೊರೊನಾ, ಲಾಕ್‍ಡೌನ್‍ನಿಂದ ಉಂಟಾಗಿರುವ ಸಂಕಷ್ಟದ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದಕ್ಕಾಗಿ ಬಿಜೆಪಿ ತನ್ನ ಸಂಘಟನೆಯ ಶಕ್ತಿಯನ್ನು ಬಳಸಿಕೊಳ್ಳಲು ಮುಂದಾಗಿದೆ. 5000 ಕೋಟಿ ನಿಧಿ ಸಂಗ್ರಹಿಸುವುದಕ್ಕಾಗಿ ಬಿಜೆಪಿ ಗುರಿ ಇಟ್ಟುಕೊಂಡಿದ್ದು, ಕಾರ್ಯಕರ್ತರ ಪಡೆಯನ್ನು ಇದಕ್ಕಾಗಿ ಸಜ್ಜುಗೊಳಿಸುತ್ತಿದೆ. ಬಿಜೆಪಿಯ ಎಲ್ಲಾ ಜಿಲ್ಲಾಧ್ಯಕ್ಷರಿಗೂ ಈ ನಿಟ್ಟಿನಲ್ಲಿ ಕೆಲಸ ಮಾಡಲು ಸೂಚಿಸಲಾಗಿದೆ. ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ರಾಜ್ಯಗಳಿಂದ ಪಿಎಂ-ಕೇರ್ಸ್‍ಗೆ ಬರುತ್ತಿರುವ ದೇಣಿಗೆಯ ಬಗ್ಗೆ ಗಮನ ಹರಿಸುತ್ತಿದ್ದಾರೆ.

ದೇಣಿಗೆ, ನಿಧಿ ಸಂಗ್ರಹದ ಕೆಲಸ ಸಮರೋಪಾದಿಯಲ್ಲಿ ನಡೆದಿದ್ದು, ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸ್ವತಃ ಪ್ರತಿದಿನವೂ ರಾಜ್ಯಮಟ್ಟದ ಕಾರ್ಯಕರ್ತರೊಂದಿಗೆ ವಿಡಿಯೋ ಸಂವಾದದ ಮೂಲಕ ಈ ಅಭಿಯಾನದ ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ. ಸಂಘಟನೆಯ ಸಾಮಥ್ರ್ಯವನ್ನು ಜನರ ಒಳಿತಿಗಾಗಿ ಬಳಸಿಕೊಳ್ಳುವುದಕ್ಕೆ ಇದು ಒಂದು ಒಳ್ಳೆಯ ಅವಕಾಶ ಎಂದು ಬಿಜೆಪಿ ಹೇಳಿದೆ. 5000 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸುವುದಕ್ಕೆ ಬಿಜೆಪಿ ತನ್ನೆಲ್ಲಾ ಸಂಪರ್ಕಗಳನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಉದ್ದೇಶಿಸಿದೆ.

ಬಿಜೆಪಿಯ 303 ಲೋಕಸಭಾ ಸದಸ್ಯರು 83 ರಾಜ್ಯಸಭಾ ಸದಸ್ಯರು ತಲಾ 1 ಕೋಟಿ ಪಿಎಂ-ಕೇರ್ಸ್‍ಗೆ ನೀಡಿದ್ದು, ತಮ್ಮ ಒಂದು ತಿಂಗಳ ವೇತನವನ್ನೂ ನೀಡಿದ್ದಾರೆ. ಸಂಸದರಿಂದ ಈಗಾಗಲೇ 400 ಕೋಟಿ ಸಂಗ್ರಹಿಸಲಾಗಿದೆ. ಇದನ್ನು ಹೊರತುಪಡಿಸಿ 1,400 ಶಾಸಕರು ಹಾಗೂ ಎಂಎಲ್‍ಸಿಗಳಿದ್ದು, ಇವರುಗಳಿಂದ ಪಿಎಂ-ಕೇರ್ಸ್‍ಗೆ 800 ಕೋಟಿ ರೂಪಾಯಿ ಸಂಗ್ರಹದ ಗುರಿ ಹೊಂದಲಾಗಿದೆ. ಇದಷ್ಟೇ ಅಲ್ಲದೇ ಪಕ್ಷದ ಮಿತ್ರಪಕ್ಷಗಳೂ ಸಹ ಪಿಎಂ-ಕೇರ್ಸ್‍ಗೆ ದೇಣಿಗೆ ನೀಡುವುದಾಗಿ ಘೋಷಿಸಿದೆ.

ಇನ್ನು 18 ಕೋಟಿ ಪ್ರಾಥಮಿಕ ಸದಸ್ಯರಿಂದ ತಲಾ 100 ರೂ. ಸಂಗ್ರಹಕ್ಕೆ ಕರೆ ನೀಡಲಾಗಿದ್ದು, ಇದರಿಂದ 1,800 ಕೋಟಿ ಸಂಗ್ರಹವಾಗಲಿದೆ. ಪಕ್ಷದಲ್ಲಿ ಸಕ್ರಿಯರಾಗಿ ರುವವರು 2-4 ಲಕ್ಷ ರೂಪಾಯಿ ಪಿಎಂ ಕೇರ್ಸ್‍ಗೆ ನೀಡಬಹುದಾಗಿದೆ. ದೇಣಿಗೆ ಸಂಗ್ರಹ ವಷ್ಟೇ ಅಲ್ಲದೇ ಪ್ರತಿಯೊಬ್ಬ ಕಾರ್ಯಕರ್ತನೂ, ಕನಿಷ್ಠ 5 ಅಗತ್ಯವಿರುವ ಜನರಿಗೆ ಆಹಾರ, ವಸತಿ ಏರ್ಪಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ಪಕ್ಷ ಸೂಚಿಸಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಬಿಜೆಪಿ ಯಾರನ್ನೂ ಹಸಿವಿನಿಂದ ಇರುವುದಕ್ಕೆ ಬಿಡುವುದಿಲ್ಲ. ನಮ್ಮ ಕಾರ್ಯಕರ್ತರು ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿರುವವರ 5 ಜನರ ಆಹಾರ, ವಸತಿ ಅಗತ್ಯತೆಗಳನ್ನು ಪೂರೈಸುತ್ತಾರೆ ಎಂದು ಬಿಜೆಪಿ ಹೇಳಿದೆ.

Translate »