ಮೈಸೂರು, ಜೂ.15- ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಮಾಜಿ ಸಚಿವ ರೇಣುಕಾ ಚಾರ್ಯ ಲಘುವಾಗಿ ಮಾತನಾಡಿರುವುದನ್ನು ಕೆಪಿಸಿಸಿ ಸದಸ್ಯರೂ ಆದ ಡಿಕೆ ಶಿವಕುಮಾರ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಜಿ.ಶ್ರೀನಾಥ್ ಬಾಬು ಖಂಡಿಸಿದ್ದಾರೆ. ಕೇವಲ ಪ್ರಚಾರಕ್ಕಾಗಿ ಡಿಕೆಶಿ ಅವರ ಬಗ್ಗೆ ಹಗುರವಾಗಿ ಮಾತನಾಡಿ, ರಾಜಕೀಯ ವಿಡಂಬಣೆ ಮಾಡಿರುವ ರೇಣುಕಾಚಾರ್ಯ, ತಮ್ಮ ವರ್ತನೆಯನ್ನು ಬದಲಿಸಿಕೊಳ್ಳ ಬೇಕು. ವಿದ್ಯಾರ್ಥಿ ಸಂಘಟನೆಯಿಂದ ಗುರುತಿಸಿಕೊಂಡು ಗ್ರಾಪಂ, ಜಿಪಂ ಚುನಾವಣೆ ಯಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆಶಿ ಅವರು, ರಾಜಕೀಯ ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷಕ್ಕೆ ಬಲ ನೀಡಿದ್ದಾರೆ. ಇಂತಹ ಚಾಣಾಕ್ಷ ರಾಜಕೀಯ ಧುರೀಣರನ್ನು ಬಿಜೆಪಿ ಕಾರ್ಯ ಕರ್ತರಿಗೆ ಸಮ ಎಂದು ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಆದರೆ ರೇಣುಕಾಚಾರ್ಯ ಅವರ ಬಾಯಿ ಚಪಲ, ನಡವಳಿಕೆ ರಾಜ್ಯಕ್ಕೆ ತಿಳಿದಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದ್ದಾರೋ ಗೊತ್ತಿಲ್ಲ. ಪ್ರಚಾರಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುವ ಚಾಳಿ ಮುಂದುವರೆಸಿದರೆ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸುವುದಾಗಿ ಶ್ರೀನಾಥ್ಬಾಬು ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.
