ಚಾಮರಾಜನಗರ, ಏ.19- ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿ ಹಾಗೂ ಕಾಡಂ ಚಿನ ಪ್ರದೇಶಗಳ 6500 ಕುಟುಂಬ ಗಳಿಗೆ ಶ್ರೀ ಮಲೆ ಮಹ ದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ತಲಾ 5 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಇದಕ್ಕಾಗಿ ಒಟ್ಟು 32 ಟನ್ ಅಕ್ಕಿ ಬಳಕೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ಕುಮಾರ್ ತಿಳಿಸಿದರು.
ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದ ರಾಷ್ಟ್ರಪತಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳಿಂದ ಕಾಣಿಕೆ ರೂಪದಲ್ಲಿ ಬಂದಿದ್ದ 89 ಟನ್ ಅಕ್ಕಿ ದಾಸ್ತಾನಿತ್ತು. ಇಂದು ಕೊರೊನಾ ಪಿಡುಗಿನಿಂದ ಇಡೀ ವಿಶ್ವವೇ ನಲುಗು ತ್ತಿದ್ದು, ಸ್ಥಳೀಯ ಜನರ ನೆರವಿಗೆ ಅಕ್ಕಿ ನೀಡಲು ಶಾಸಕ ನರೇಂದ್ರ ಅವರ ಮನವಿಯ ಮೇರೆಗೆ ಮುಖ್ಯಮಂತ್ರಿ ಯವರೊಂದಿಗೆ ಚರ್ಚಿಸಿದಾಗ ಅವರೂ ಕೂಡ ಅಕ್ಕಿಯನ್ನು ಬಡವರಿಗೆ ಉಚಿತ ವಾಗಿ ನೀಡಲು ಸಮ್ಮತಿಸಿದರು. ಅಲ್ಲದೆ ಪ್ರಾಧಿಕಾರದಿಂದ 10 ಸಾವಿರ ಮಾಸ್ಕ್ ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಈ ದಿನ ಮನಸ್ಸಿಗೆ ತುಂಬಾ ಸಮಾಧಾನ ನೀಡಿದ್ದು, ಮಾದಪ್ಪನ ಪ್ರಸಾದವನ್ನು ಬಡಜನರಿಗೆ ತಲುಪಿಸಿದ ಸಂತೋಷವಿದೆ ಎಂದರು.
ಪ್ರಾಧಿಕಾರದಲ್ಲಿ ಒಟ್ಟು 89 ಟನ್ ಅಕ್ಕಿ ದಾಸ್ತಾನು ಇದೆ. ಇದನ್ನು ಹೊರತುಪಡಿಸಿ, ಇನ್ನೂ 52 ಟನ್ ಅಕ್ಕಿ ದಾಸ್ತಾನಿದ್ದು ದೇವಾ ಲಯ ತೆರೆದ ಮೇಲೆ ದಾಸೋಹಕ್ಕೆ ಕೊರತೆ ಯಾಗದ ರೀತಿ ಕ್ರಮ ವಹಿಸಲಾಗಿದೆ ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪ್ರಕರಣ ಕಂಡು ಬಂದಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಕಾರ್ಯನಿರ್ವಹಿಸಿ ಎಲ್ಲರೂ ಸಹಕಾರ ನೀಡೋಣ ಎಂದರು.
ಕಳೆದ ಬಾರಿ ಜಿಲ್ಲೆಗೆ ಭೇಟಿ ನೀಡಿದಾಗ ತಮಗೆ ಉದ್ಯೋಗ ನೀಡುವಂತೆ ಬಿಳಿಗಿರಿ ರಂಗನಬೆಟ್ಟ ಸುತ್ತಮುತ್ತಲ ಗ್ರಾಮವಾಸಿ ಗಳು ಮನವಿ ಮಾಡಿದ್ದರು. ಈ ಹಿನ್ನೆಲೆ ಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಜಾಬ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆದುಕೊಟ್ಟು ಆನೆಕಂದಕ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ ಗುಂಡ್ಲುಪೇಟೆ ತಾಲೂಕಿನ ಹಂಗಳ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿ ಮತ್ತು ಜಂಗಲ್ ಕಟಿಂಗ್ ಕಾಮಗಾರಿಗಳನ್ನು ಕೈಗೆತ್ತಿ ಕೊಂಡು ಉದ್ಯೋಗ ದೊರಕಿಸಿಕೊಡ ಲಾಗಿದೆ. ಈ ನಿಟ್ಟಿನಲ್ಲಿ ಉದ್ಯೋಗದ ಆಕಾಂಕ್ಷಿಗಳು ಆಯಾ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.
ಈ ವೇಳೆ ಶಾಸಕರಾದ ನರೇಂದ್ರ, ಎನ್. ಮಹೇಶ್, ಜಿಪಂ ಸಿಇಓ ನಾರಾಯಣ ರಾವ್, ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಇನ್ನಿತರರಿದ್ದರು.