ಅರಣ್ಯವಾಸಿಗಳ ಅಭಿವೃದ್ಧಿಗೆ ನೆರವಾಗಲು ಅರಣ್ಯ ಸಚಿವ ಸೂಚನೆ
ಚಾಮರಾಜನಗರ

ಅರಣ್ಯವಾಸಿಗಳ ಅಭಿವೃದ್ಧಿಗೆ ನೆರವಾಗಲು ಅರಣ್ಯ ಸಚಿವ ಸೂಚನೆ

August 28, 2021

ಚಾಮರಾಜನಗರ, ಆ.27-ಲಂಟಾನ ಗಿಡಗಳನ್ನು ತೆರವುಗೊಳಿಸುವಂತಹ ಉದ್ಯೋಗ ಕಲ್ಪಿಸುವುದು ಹಾಗೂ ಜೇನು ತುಪ್ಪ ಸಂಗ್ರಹಣೆ ಉಪ ಕಸುಬಿಗೆ ದೊಡ್ಡ ಕಂಪನಿಗಳನ್ನು ಪರಿಚಯಿಸಿ ಮಾರುಕಟ್ಟೆ ದೊರಕಿಸಿಕೊಡುವ ಮೂಲಕ ಬಿಆರ್‍ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಸುತ್ತಲಿನ ಆದಿವಾಸಿಗಳಿಗೆ ನೆರವಾಗು ವಂತೆ ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಗಳ ಸಚಿವ ಉಮೇಶ್ ವಿ. ಕತ್ತಿ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.

ಬಿಆರ್‍ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿದ ಬಳಿಕ ಅಧಿಕಾರಿಗಳೊಂದಿಗೆ ಬಿಳಿಗಿರಿ ರಂಗನ ಬೆಟ್ಟ ವನ್ಯಜೀವಿ ಧಾಮದ ಸಮಗ್ರ ವಿಷಯಗಳು ಹಾಗೂ ಗಿರಿಜನರ ಆಹಾರ ಭದ್ರತೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾನವ- ವನ್ಯಪ್ರಾಣಿ ಸಂಘರ್ಷ ತಪ್ಪಿಸುವ ದಿಸೆಯಲ್ಲಿ ಕಂದಕ ನಿರ್ಮಾಣ ಕ್ಕಿಂತ ರೈಲ್ವೆ ಹಳಿಯ ಬೇಲಿಗಳ ನಿರ್ಮಾಣ ಸಧೃಢವಾಗಿಲಿದೆ. ಇಂತಹ ಕೆಲಸಗಳಿಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.

ಶಾಸಕ ಆರ್.ನರೇಂದ್ರ ಮಾತನಾಡಿ, ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಸುತ್ತಲಿನ ಜನರ ಜೊತೆ ಉತ್ತಮ ಬಾಂಧವ್ಯ ಹೊಂದಿ ಸಂಭವಿಸ ಬಹುದಾದ ಕಾಡ್ಗಿಚ್ಚು ತಡೆಯಲು ಸಹಕಾರ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿಯವರಾದ ಎಸ್.ಕಾತ್ಯಯಿನಿದೇವಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಗಳ ಇಲಾಖೆಯ ಜಂಟಿ ನಿರ್ದೇಶಕರಾದ ಕಾ.ರಾಮೇಶ್ವರಪ್ಪ, ಬಿಆರ್‍ಟಿ ಉಪ ಸಂರಕ್ಷಣಾಧಿಕಾರಿ ಡಾ.ಸಂತೋಷಕುಮಾರ್, ಮಲೆ ಮಹದೇಶ್ವರ ವನ್ಯಜೀವಿ ಸಂರ ಕ್ಷಣಾಧಿಕಾರಿ ಏಡುಕೊಂಡಲು, ವನ್ಯಜೀವಿ ಮಂಡಳಿಯ ಮಲ್ಲೇಶಪ್ಪ, ತಹಸೀ ಲ್ದಾರ್‍ರಾದ ಚಿದಾನಂದ ಗುರುಸ್ವಾಮಿ, ಇತರರು ಸಭೆಯಲ್ಲಿದ್ದರು.

ಇದಕ್ಕೂ ಮೊದಲು ಸಚಿವ ಉಮೇಶ್ ವಿ.ಕತ್ತಿ ಅವರು ಬಿಆರ್‍ಟಿ ವ್ಯಾಪ್ತಿಯ ವಿವಿಧ ಪೋಡು, ಹಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಳೀಯರ ಅಹವಾಲು ಆಲಿಸಿದರು. ಅರಣ್ಯ ಇಲಾಖೆಯ ನವಿಕರಿಸಿದ ವಸತಿ ಗೃಹ ಹಾಗೂ ಕನ್ನೇರಿ ಕಾಲೋನಿ ಪೋಡಿನಲ್ಲಿ ಇಡಿಸಿ ಅವರ ಸಹಯೋಗದಲ್ಲಿ ನವೀಕರಿಸಿರುವ ರಾಗಿ ಹಿಟ್ಟು ಗಿರಣಿಗೆ ಚಾಲನೆ ನೀಡಿದರು.

ಬಿಆರ್‍ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಬಿಸಿಲಗೆರೆ ಪೋಡು, ಕಾಡಿಗೆರೆ ಪೋಡು ಹಾಗೂ ಬೇಡಗುಳಿ ಪೋಡಿಗೆ ಭೇಟಿ ನೀಡಿ ಪಡಿತರ ಚೀಟಿ ಸಂಬಂಧ ಪಲಾನುಭವಿಗಳ ಜೊತೆಗೆ ಚರ್ಚಿಸಿ ಪಡಿತರ ಸೌಲಭ್ಯ ತಲಪುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡರು.

Translate »