`ಅವನಂತಹ ಪೆದ್ದ ಯಾರೂ ಇಲ್ಲ’ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ
ತುಮಕೂರು, ಅ.7- ಡಾ. ಸಿ.ಎಂ.ರಾಜೇಶ್ಗೌಡ ಬಿಜೆಪಿ ಸೇರಲು ನಾನು ಕಾರಣ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಅವನಂತಹ ಪೆದ್ದ ಯಾರೂ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ನಗರದಲ್ಲಿ ಬುಧವಾರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, `ರಾಜೇಶ್, ನನ್ನ ಮಗನ ಸ್ನೇಹಿತ. ನನ್ನ ಸ್ನೇಹಿತ ಅಲ್ಲ. ನನ್ನ ವಯಸ್ಸು ಎಷ್ಟು ಆತನ ವಯಸ್ಸು ಎಷ್ಟು? ರಾಜೇಶ್ ತಂದೆ ಸಿ.ಪಿ. ಮೂಡಲ ಗಿರಿಯಪ್ಪ ಈ ಹಿಂದೆ ಜೆಡಿಎಸ್ನಲ್ಲಿ ಇದ್ದವರು. ಆ ವಿಶ್ವಾಸದಿಂದ ಕುಮಾರಸ್ವಾಮಿಯೇ ರಾಜೇಶ್ ನನ್ನು ಬಿಜೆಪಿಗೆ ಕಳುಹಿಸಿದ್ದಾರೆ ಎಂದು ನಾನು ಹೇಳುವೆ’ ಎಂದರು.
ರಾಜಕೀಯವೇ ಬೇರೆ ಸ್ನೇಹವೇ ಬೇರೆ. ಕುಮಾರಸ್ವಾಮಿ ಜವಾಬ್ದಾರಿಯಿಂದ ರಾಜಕೀಯ ಹೇಳಿಕೆಗಳನ್ನು ಕೊಡಬೇಕು. ಕುಮಾರಸ್ವಾಮಿ ನೀಡುವ ರಾಜಕೀಯ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯಿಸು ವುದಿಲ್ಲ ಎಂದು ಹೇಳಿದರು.
ಶಿರಾ ಮತ್ತು ರಾಜರಾಜೇಶ್ವರಿ ನಗರದಲ್ಲಿ ನಾವು ಗೆಲವು ಸಾಧಿಸುತ್ತೇವೆ. ಶಿರಾದಲ್ಲಿ ತ್ರಿಕೋನ ಸ್ಪರ್ಧೆ ಇದೆ. ಆದರೆ ಅನುಕಂಪ ಜೆಡಿಎಸ್ನವರ ಕೈ ಹಿಡಿಯುವುದಿಲ್ಲ ಎಂದು ತಿಳಿಸಿದರು. ಹಿಂದುಳಿದ ವರ್ಗಗಳ ಆಯೋ ಗವು ನಡೆಸಿರುವ ರಾಜ್ಯದ ಎಲ್ಲ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳಬೇಕು. ಇದರಿಂದ ಸಾಮಾಜಿಕ ನ್ಯಾಯ ಕಲ್ಪಿಸಲು ಸಾಧ್ಯ ಎಂದರು.
`ಸಿದ್ದರಾಮಯ್ಯ ಜಾಣ ಪೆದ್ದ’ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು
ಬೆಂಗಳೂರು, ಅ.7- ಮೈತ್ರಿ ಸರ್ಕಾರ ತೆಗೆಯಲು ಅಳಲೇ ಕಾಯಿ ಪಂಡಿತನಂತೆ ಔಷಧ ಅರೆದ ವ್ಯಕ್ತಿಗೆ ನಮ್ಮ ಪಕ್ಷದ ಮೂವರು ಶಾಸಕರು ಕದ್ದು ಓಡಿ ಹೋದರೋ? ನಾವೇ ಕತ್ತು ಹಿಡಿದು ನೂಕಿದವೋ? ಎಂದು ಗೊತ್ತಿಲ್ಲದೇ ಜಾಣ ಪೆದ್ದನಾಗಿದ್ದು ವಿಪರ್ಯಾಸ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
`ಕುಮಾರಸ್ವಾಮಿ ಪೆದ್ದ’ ಎಂಬ ಸಿದ್ದರಾಮಯ್ಯ ಹೇಳಿ ಕೆಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, `ಕಾಂಗ್ರೆಸ್ನ ಹತ್ತಾರು ಮಂದಿಯ ಪೈಕಿ, ಎದೆ ಸೀಳಿದರೆ ಸಿದ್ದು ಕಾಣುತ್ತಾರೆ’ ಎಂಬ ಅನುಯಾಯಿಗಳು ಬಿಜೆಪಿಗೆ ಹಾರಲು ಮಸಲತ್ತು ನಡೆಸಿದವರು ಯಾರೆಂಬುದು ‘ಸಿದ್ಧವನ’ದಲ್ಲಿ ಕುಳಿತಿದ್ದ ‘ರಾಮ’ನಿಗೂ ಗೊತ್ತಿತ್ತು ಎಂದು ಕುಟುಕಿದ್ದಾರೆ. ಜನಕಲ್ಯಾಣಕ್ಕೆ ದೂರದೃಷ್ಟಿಯ ಕಾರ್ಯಸಾಧ್ಯ ವಾದ ಯೋಜನೆಗಳನ್ನು ರೂಪಿಸುವಲ್ಲಿ ಎಡವಿದ್ದ ಸಿದ್ದರಾಮಯ್ಯ ಅಗ್ಗದ ಯೋಜನೆಗಳ ಮೂಲಕ ಜನರ ತುಟಿಗೆ ತುಪ್ಪ ಸವರುವ ಆಡಳಿತಕ್ಕೆ ಕಳೆದ ಬಾರಿ ತಕ್ಕ ಶಾಸ್ತಿ ಮಾಡಿದ್ದರು. ಇವರ ದುರಾಡಳಿತವನ್ನು ಜನತೆ ಇನ್ನೂ ಮರೆ ತಿಲ್ಲ. ಉಪಚುನಾವಣೆಯಲ್ಲೂ ಕಾಂಗ್ರೆಸ್ಗೆ ಪಾಠ ಕಲಿಸಲಿದ್ದಾರೆ.
ಅಧಿಕಾರದಲ್ಲಿದ್ದಾಗಲೇ ಮತ್ತೆ ಅಧಿಕಾರ ನೀಡದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನರು ಅರ್ಧಚಂದ್ರ ಪ್ರಯೋಗ ಮಾಡಿದರು. ಈಗ ಉಪಚುನಾವಣೆಯಲ್ಲಿ ಕಾಂಗ್ರೆಸ್ ಕೈ ಹಿಡಿಯುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ಕೇವಲ ಭ್ರಮೆ. ಯಾರನ್ನು ಯಾರು ಎಲ್ಲಿಗೆ ಕಳುಹಿಸಿದರು? ಸ್ವಾರ್ಥ ರಾಜಕಾರಣಕ್ಕಾಗಿ ಮೂಲ ಕಾಂಗ್ರೆಸ್ಸಿಗರ ಮೇಲೆ ಯಾರು ಸವಾರಿ ಮಾಡುತ್ತಿದ್ದಾರೆ? ಎಂಬುದನ್ನು ತಿಳಿಯದಷ್ಟು ಜನ ಪೆದ್ದರಲ್ಲ. ನಮ್ಮ ಮೂವರು ಶಾಸಕರು ಪಕ್ಷದಿಂದ ಹೊರಹೋಗಲು ನಡೆದ ಸಂಚಿನಲ್ಲಿ ಹಣ ಅಧಿಕಾರದ ಆಮಿಷ ಮಾತ್ರವಲ್ಲ. ಕೆಲವರ ‘ಕೈ’ವಾಡ ಕೂಡ ಕಾರಣ ಎಂದು ಕುಮಾರಸ್ವಾಮಿ ದೂರಿದ್ದಾರೆ.