ಮೈಸೂರು, ಏ.19(ಆರ್ಕೆಬಿ)- ಲಾಕ್ಡೌನ್ನಿಂದಾಗಿ ಬಡ ನೇಕಾರನ ಬದುಕು ಮೂರಾಬಟ್ಟೆಯಾಗಿ ಬೀದಿಗೆ ಬಿದ್ದಿದ್ದು, ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು ಎಂದು ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ವೇದಿಕೆಯು ಮೈಸೂರು ಜಿಲ್ಲಾ ಧಿಕಾರಿಗೆ ಮನವಿ ಮಾಡಿದೆ.
ಕೋವಿಡ್-19 ತಡೆಗಾಗಿ ಜಾರಿ ಗೊಳಿಸಿದ ಲಾಕ್ಡೌನ್ನಿಂದಾಗಿ ರಾಜ್ಯಾದ್ಯಂತ ವಾಸವಾಗಿರುವ ಬಡ ನೇಕಾರರ ಬದುಕು ಶೋಚನೀಯ ವಾಗಿದೆ. ಜೀವನ ನಿರ್ವಹಣೆ ಕಷ್ಟವಾಗಿದೆ. ರೈತ ಸಮಾಜದ ಬೆನ್ನೆಲುಬಾದರೆ, ನೇಕಾರರು ಸಮಾಜದ ಮಾನ ರಕ್ಷಿಸುವವರು. ಕುಲಕಸುಬನ್ನೇ ಅವಲಂಬಿಸಿ, ಅಂದಂದಿನ ದುಡಿಮೆ ಯನ್ನೇ ನಂಬಿ ದಿನದೂಡುವ ಸಾವಿರಾರು ನೇಕಾರ ಕುಟುಂಬಗಳು ಈಗ ಅತಂತ್ರ ವಾಗಿವೆ. ಸಮುದಾಯಕ್ಕೆ ಸರ್ಕಾರ ಯಾವುದೇ ಸೌಲಭ್ಯ ಘೋಷಿಸಿಲ್ಲ. ಜನಧನ್ ಯೋಜನೆಯ 500 ರೂ. ಮತ್ತು ಪ್ರತಿ ಬಡ ನೇಕಾರರ ಕುಟುಂಬಕ್ಕೂ ಮಾಸಿಕ ನಿರ್ವಹಣಾ ವೆಚ್ಚ 5000 ರೂ. ಕೂಡಲೇ ವಿತರಿಸಬೇಕು. ನೇಕಾರರ ಸಾಲಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ನೇಕಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ದಿವಾಕರ್, ಪ್ರಧಾನ ಕಾರ್ಯದರ್ಶಿ ಆರ್.ನರಸಿಂಹಮೂರ್ತಿ ಒತ್ತಾಯಿಸಿದ್ದಾರೆ.