ತಿ.ನರಸೀಪುರ, ಮೇ 24(ಎಸ್ಕೆ)- ಕೊರೊನಾ ನಿಯಂತ್ರಿಸುವ ಹಿನ್ನೆಲೆಯಲ್ಲಿ ಭಾನುವಾರ ಕರೆ ನೀಡಿದ್ದ ಕಟ್ಟುನಿಟ್ಟಿನ ಲಾಕ್ಡೌನ್ ಪಟ್ಟಣದಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮೇ ತಿಂಗಳು ಪ್ರತಿ ಭಾನುವಾರ ರಾಜ್ಯ ಸರ್ಕಾರ ಸಂಪೂರ್ಣ ಲಾಕ್ಡೌನ್ಗೆ ಕರೆ ನೀಡಿತ್ತು. ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಸದಾ ಜನ ಜಂಗುಳಿಯಿಂದ ಗಿಜಿಗುಡುತ್ತಿದ್ದ ಲಿಂಕ್ ರಸ್ತೆ, ಮಾರುಕಟ್ಟೆ ರಸ್ತೆ, ಕಾಲೇಜು ರಸ್ತೆಗಳು ಜನ ಸಂಚಾರ ವಿಲ್ಲದೇ ಬಿಕೋ ಎನ್ನುತ್ತಿದ್ದವು.
ತಾಲೂಕು ಆಡಳಿತದ ಕಟ್ಟುನಿಟ್ಟಿನ ಆದೇಶ ದಿಂದ ಅನಗತ್ಯ ವ್ಯಾಪಾರ -ವಹಿವಾಟಿಗೆ ಅವಕಾಶವಿರಲಿಲ್ಲ. ಬೆಳಿಗ್ಗೆ 7 ರಿಂದ 11ರ ವರೆಗೆ ದಿನಸಿ, ತರಕಾರಿ ಹಾಗೂ ಮಾಂಸ ಮಾರಾಟಕ್ಕೆ ಅವಕಾಶ ಮಾಡಿ ಕೊಡಲಾಗಿತ್ತು. ಆ ವೇಳೆ ಯಲ್ಲಿ ಮಾಂಸ ದಂಗಡಿಗಳ ಮುಂದೆ ಜನ ಜಂಗುಳಿ ಹೊರತು ಪಡಿಸಿದರೆ ನಂತರ ಪಟ್ಟಣ ಸಂಪೂರ್ಣ ವಾಗಿ ಸ್ತಬ್ಧವಾಯಿತು.
ಮದ್ಯದಂಗಡಿ, ಜವಳಿ, ಜ್ಯೂಯಲರಿ, ಶೇವಿಂಗ್ ಷಾಪ್, ಬ್ಯೂಟಿ ಪಾರ್ಲರ್, ತರಕಾರಿ ಹಾಗೂ ಇನ್ನಿತರೇ ಅಂಗಡಿ ಮಾಲೀಕರು ತಮ್ಮ ವಹಿವಾಟನ್ನು ಸ್ಥಗಿತ ಗೊಳಿಸಿದ್ದರು. ಹಾಲಿನ ಬೂತ್, ಮೆಡಿಕಲ್ ಸ್ಟೋರ್ ಹಾಗೂ ಆಸ್ಪತ್ರೆಗಳು ಎಂದಿನಂತೆ ತೆರದಿದ್ದವು. ಬೆಳಿಗ್ಗೆ 11 ಗಂಟೆ ತನಕ ಯುವಕರು ವಾಹನಗಳಲ್ಲಿ ಸುಖಾ ಸುಮ್ಮನೆ ಓಡಾಟ ನಡೆಸಿದರೂ ಪಟ್ಟಣವೇ ಸ್ತಬ್ಧಗೊಂಡ ಹಿನ್ನೆಲೆ ಯಲ್ಲಿ ಅವರೂ ಮನೆ ಸೇರಿಕೊಂಡರು. ತಹಸೀಲ್ದಾರ್ ಡಿ.ನಾಗೇಶ್, ವೃತ್ತ ನಿರೀಕ್ಷಕ ಎನ್.ಆರ್.ಲವ ಹಾಗೂ ಪುರಸಭಾ ಮುಖ್ಯಾಧಿಕಾರಿ ಡಿ.ಅಶೋಕ್ ಅವರ ಕಟ್ಟುನಿಟ್ಟಿನ ಆದೇಶಕ್ಕೆ ಸಾರ್ವಜನಿಕರೂ ಸ್ವಯಂ ಪ್ರೇರಿತರಾಗಿ ಸಾಥ್ ನೀಡಿದರು. ಪ್ರಧಾನಿ ಮೋದಿಯವರು ಕರೆ ನೀಡಿದ್ದ ಜನತಾ ಕಫ್ರ್ಯೂ ಮಾದರಿಯಲ್ಲೇ ಪಟ್ಟಣದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್ ಯಶಸ್ವಿಯಾಯಿತು.