ಬೆಂಗಳೂರು, ನ.4(ಕೆಎಂಶಿ)- ‘ರಾಜ್ಯ ಹಾಗೂ ಕೇಂದ್ರ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸದಿರುವುದು, ಜನಪರವಾದ ಕೆಲಸ ಮಾಡದೇ ಇರುವುದು ಹಾಗೂ ರಾಜಕೀಯ ವಿದ್ಯಮಾನಗಳಿಂದ ಬೇಸತ್ತು ಹೆಚ್ಚಿನ ಮತದಾರ ಮತ ಹಾಕಲು ಬಂದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ವಿದ್ಯಾವಂತ ಮತದಾರರು ಈ ರಾಜಕೀಯ ವಿದ್ಯಮಾನಗಳನ್ನು ನೋಡಿ, ನಾವು ಯಾವ ಕಾರಣಕ್ಕೆ ಮತ ಹಾಕಬೇಕು ಎಂದು ಬೇಸರಗೊಂಡಿದ್ದಾರೆ.
ಮತ ಹಾಕಿ ಎಂದು ಮುಖ್ಯಮಂತ್ರಿಗಳು ಹಾಗೂ ಇತರರು ಮನವಿ ಮಾಡಿದ್ದರು. ಆದರೆ ಅವರಿಗೆ ಮತ ಹಾಕಲು ಇಚ್ಛೆ ಇಲ್ಲದಿರುವ ಕಾರಣ ಮತ ಗಟ್ಟೆಗೆ ಬಂದಿಲ್ಲ. ಮತದಾರರ ಮೇಲೆ ನಮಗೆ ವಿಶ್ವಾಸವಿದೆ. ನಿನ್ನೆ ಮತ ಹಾಕಿದ ಎಲ್ಲರಿಗೂ ಅಭಿನಂದಿಸುತ್ತೇನೆ. ಇನ್ನು ವಿಶೇಷವಾಗಿ ಈ ಚುನಾವಣೆಯಲ್ಲಿ ಹಗಲಿರುಳು ಶ್ರಮಿಸಿದ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಬೇರೆ ಪಕ್ಷದ ಕಾರ್ಯಕರ್ತರಿಗೂ ಧನ್ಯವಾದಗಳು. ಎರಡೂ ಕ್ಷೇತ್ರದಲ್ಲಿ ಬೇರೆ ಪಕ್ಷಗಳ ಕಾರ್ಯಕರ್ತರು ನಮಗೆ ಬೆಂಬಲ ನೀಡಿದ್ದಾರೆ. ಚುನಾವಣಾ ಆಯೋಗ ನಾವು ಕೊಟ್ಟ ಮಾಹಿತಿಗೆ ಪೂರ್ಣ ಪ್ರಮಾಣದಲ್ಲಿ ಅಲ್ಲದಿ ದ್ದರೂ ತಕ್ಕಮಟ್ಟಿಗೆ ಕಾರ್ಯಪ್ರವೃತ್ತರಾಗಿದ್ದರು. ಪೊಲೀಸರ ದುರಾಡಳಿತ, ಅಧಿಕಾರಿಗಳ ದುರ್ಬಳಕೆ, ಅಕ್ರಮ ವಿಚಾರವಾಗಿ ನಾವು ಕೊಟ್ಟ ದೂರಿನ ಸತ್ಯಾಸತ್ಯತೆಯನ್ನು ಪರಿಶೀಲಿಸಿ ದ್ದಾರೆ. ಅದರ ಪರಿಣಾಮ ಏನಾಯ್ತು ಎಂಬುದು ಗೊತ್ತಿಲ್ಲ. ರಾಜಕಾರಣದಲ್ಲಿ ನನಗಿಂತ ಸಿದ್ದರಾಮಯ್ಯನವರು ಅನುಭವಸ್ಥರು. ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಈ ಚುನಾವಣೆ ಕಾಂಗ್ರೆಸ್ ಪಕ್ಷದ ಗೆಲುವಾಗುತ್ತದೆ. ನಾವು ಹತ್ತು ಟೇಕ್ ತಗೊಳೋಕೆ ಸಿನಿಮಾ ಮಾಡುತ್ತಿಲ್ಲ. ಅವರ ರೀತಿ ಕಟ್ ಅಂಡ್ ಪೇಸ್ಟ್ ಮಾಡುವುದಿಲ್ಲ. ಮುನಿರತ್ನ ಗೆದ್ದರೆ ಕೇವಲ ಇಂಧನ ಖಾತೆ ಯಾಕೆ, ಮುಖ್ಯಮಂತ್ರಿ ಸ್ಥಾನವನ್ನೇ ಪಡೆಯಲಿ. ಇದು ಕೇವಲ ಬಿಜೆಪಿ ಸರ್ಕಾರ ಅಲ್ಲ, ಕಾಂಗ್ರೆಸ್-ಬಿಜೆಪಿ ಸರ್ಕಾರ.